ಕಲಘಟಗಿ: ರಾಜ್ಯದ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯಿಂದ (ನಾರಾಯಣಗೌಡ ಬಣ) ಪಟ್ಟಣದಲ್ಲಿ ಉಪ ತಹಶೀಲ್ದಾರ್ ತಾಂಬ್ರೆ ಅವರಿಗೆ ಮನವಿ ಸಲ್ಲಿಸಲಾಯಿತು.
ವೇದಿಕೆ ತಾಲ್ಲೂು ಘಟಕದ ಅಧ್ಯಕ್ಷ ಸಚಿನ ಪವಾರ ಮಾತನಾಡಿ, ರಾಜ್ಯದ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸುಮಾರು 14,564 ಅತಿಥಿ ಉಪನ್ಯಾಸಕರಿದ್ದು ಎರಡು ದಶಕಗಳಿಂದ ಕನಿಷ್ಠ ಗೌರವಧನಕ್ಕೆ ಕೆಲಸ ಮಾಡುತ್ತಿದ್ದಾರೆ. ಯಾವುದೇ ಸೇವಾ ಭದ್ರತೆ ಮತ್ತು ಸಾಮಾಜಿಕ ಭದ್ರತಾ ಸೌಲಭ್ಯಗಳೂ ಇಲ್ಲ. ಮಾನವೀಯತೆ ಆಧಾರದ ಮೇಲೆ ಅತಿಥಿ ಉಪನ್ಯಾಸಕರ ಸೇವೆಯನ್ನು ಕೂಡಲೇ ಕಾಯಂಗೊಳಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಬೇಕು. ವರ್ಷದ 12 ತಿಂಗಳು ಯುಜಿಸಿ ನಿಯಮಾವಳಿಯಂತೆ ನಿಯಮಿತವಾಗಿ ವೇತನ ನೀಡಬೇಕು. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಸಾಮಾಜಿಕ ಭದ್ರತಾ ಸೌಲಭ್ಯಗಳಾದ ಪಿ.ಎಫ್, ಇ.ಎಸ್.ಐ, ಸಾಮಾನ್ಯ ರಜೆ, ಗಳಿಕೆ ರಜೆ, ಮಹಿಳಾ ಅತಿಥಿ ಉಪನ್ಯಾಸಕರುಗಳಿಗೆ ಹೆರಿಗೆ ರಜೆ ಸೌಲಭ್ಯ ನೀಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಅತಿಥಿ ಉಪನ್ಯಾಸಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ ಕಳ್ಳಿಮನಿ, ಮಲ್ಲಿಕಾರ್ಜುನ ಪುರದನಗೌಡರ, ಈರಣ್ಣ ಹಳ್ಳಿಕೆರಿ, ರಮೇಶ ಮೊರಬ, ವಿಠ್ಠಲ ಹೂಲಿಹೂಂಡ, ರವಿ ಮಾನೆ, ಸಂಜು ಪವಾರ, ಪುಟ್ಟ ಕಟ್ಟಿಮನಿ, ಮಂಜು ಭೋವಿ, ದೇವರಾಜ, ಆನಂದ ತುಕ್ಕಾಯಿ, ಲಕ್ಷ್ಮಣ ಪುಂಡಲೀಕ, ಹನುಂತ ಕಾಳೆ ಇದ್ದರು.