ಹುಬ್ಬಳ್ಳಿ: ಗ್ರಾಮ ಪಂಚಾಯ್ತಿ ಮಟ್ಟದಿಂದಲೇ ಕಸ ವಿಲೇವಾರಿ ಹಾಗೂ ಬೀದಿ ದೀಪಗಳಿಗೆ ಸೋಲಾರ್ ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸಲಾಗುತ್ತಿದೆ. ಮುಂದಿನ ಮೂರೂವರೆ ವರ್ಷಗಳ ಅವಧಿಯಲ್ಲಿ ರಾಜ್ಯದ 6,021 ಗ್ರಾ.ಪಂ.ಗಳಲ್ಲಿ ಈ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ’ಕಸ ಸಂಗ್ರಹ, ವಿಲೇವಾರಿ ಕುರಿತು ಈವರೆಗೆ ರಾಜ್ಯದ 400 ಗ್ರಾಮ ಪಂಚಾಯ್ತಿಗಳ ಪಿಡಿಒಗಳು ಮತ್ತು ಅಧ್ಯಕ್ಷರಿಗೆ ತರಬೇತಿ ನೀಡಲಾಗಿದೆ. ದ್ರವ ಮತ್ತು ಘನ ರೂಪದ ತ್ಯಾಜ್ಯಗಳ ವಿಲೇವಾರಿಗೆ ಒತ್ತು ನೀಡಲಾಗುತ್ತದೆ. ಇದಕ್ಕೆ ಕೇಂದ್ರ ಸರ್ಕಾರ ಪ್ರತಿ ಗ್ರಾ.ಪಂ.ಗೆ ತಲಾ ₹20 ಲಕ್ಷ ನೀಡುತ್ತದೆ. ಪಂಚಾಯ್ತಿಗಳು ತಮಗೆ ಸಿಗುವ ಅನುದಾನದಲ್ಲಿಯೇ ಹೊಂದಾಣಿಕೆ ಮಾಡಿಕೊಂಡು ಸೋಲಾರ್ ವಿದ್ಯುತ್ ಸೌಲಭ್ಯ ಕಲ್ಪಿಸಲು ಮುಂದಾಗಬೇಕು. ಇದಕ್ಕೆ ಸರ್ಕಾರದಿಂದ ಪ್ರತ್ಯೇಕ ಅನುದಾನ ಸಿಗುವುದಿಲ್ಲ‘ ಎಂದು ಸ್ಪಷ್ಟಪಡಿಸಿದರು.
ಕ್ರಮ ಕೈಗೊಳ್ಳುವೆ:ಪಿಡಿಒಗಳು ಕೇಂದ್ರಸ್ಥಾನದಲ್ಲಿದ್ದು ಕೆಲಸ ಮಾಡುವುದಿಲ್ಲ ಎನ್ನುವ ದೂರು ಸಾಮಾನ್ಯವಾಗಿದೆ. ಮುಂದೆ ಇದೇ ದೂರುಗಳು ಕೇಳಿಬಂದರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಈಶ್ವರಪ್ಪ ಎಚ್ಚರಿಕೆ ನೀಡಿದರು.
ತಪ್ಪು ಮಾಹಿತಿ: ಅಧಿಕಾರಿಗಳು ನೀಡುವ ಅಂಕಿ ಅಂಶಗಳ ಆಧಾರದ ಮೇಲೆ ಬಯಲು ಶೌಚಮುಕ್ತ ಗ್ರಾಮ ಎಂದು ಘೋಷಣೆ ಮಾಡುವುದೇ ತಪ್ಪು. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಲಾಗುವುದು ಎಂದರು.
‘ತಪ್ಪು ಅಂಕಿ ಅಂಶ ಮಾಹಿತಿ ನೀಡಿ ದಾರಿ ತಪ್ಪಿಸಲಾಗುತ್ತಿದೆ. ಆದರೆ, ಮೊದಲಿಗಿಂತಲೂ ಈಗ ಹೆಚ್ಚು ಶೌಚಾಲಯಗಳು ನಿರ್ಮಾವಾಗಿವೆ. ಬಹಳಷ್ಟು ಜನ ಅವುಗಳನ್ನು ಬಳಸುತ್ತಿಲ್ಲ. ಜಾಗದ ಕೊರತೆ ಇದ್ದರೆ ಸಾರ್ವಜನಿಕ ಶೌಚಾಲಯಗಳನ್ನು ಕಟ್ಟಲಾಗುತ್ತಿದೆ. ಇವುಗಳ ನಿರ್ವಹಣೆ ಯಾರು ಮಾಡಬೇಕು ಎನ್ನುವುದೇ ದೊಡ್ಡ ಸಮಸ್ಯೆಯಾಗಿದೆ’ ಎಂದರು.
ಸಚಿವ ಪ್ರಭು ಚವ್ಹಾಣ, ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಈರಣ್ಣ ಜಡಿ, ಬಿಜೆಪಿ ಮುಖಂಡರಾದ ರಂಗಬದ್ದಿ, ವೀರೇಶ ಸಂಗಳದ, ಶಿವಾನಂದ ಮುತ್ತಣ್ಣನವರ, ಹನುಮಂತಪ್ಪ ದೊಡ್ಡಮನಿ ಇದ್ದರು.