ಅಳ್ನಾವರ: ಪರಿಸರ ಸಂರಕ್ಷಣೆ ನಮ್ಮೆಲ್ಲರ ಗುರುತರ ಜವಾಬ್ದಾರಿ. ಶಾಲಾ ಹಂತದಲ್ಲಿಯೇ ಪರಿಸರ ಉಳಿಯುವಿಕೆ ಹಾಗೂ ಮಹತ್ವ ಕುರಿತು ಅರಿತುಕೊಳ್ಳಬೇಕು. ಪ್ರತಿಯೊಬ್ಬರು ಒಂದೂಂದು ಸಸಿ ನೆಟ್ಟು ಪಾಲನೆ, ಪೋಷಣೆ ಮಾಡಬೇಕು ಎಂದು ವಲಯ ಅರಣ್ಯಾಧಿಕಾರಿ ಪ್ರಸನ್ನ ಸುಬೇದಾರ ಹೇಳಿದರು.
ಇಲ್ಲಿನ ಸೇಂಟ್ ತೆರೇಸಾ ಹಿರಿಯ ಪ್ರಾಥಮಿಕ ಶಾಲೆಯ ಅರಣ್ಯ ಇಲಾಖೆ ಸಹಯೋಗದಲ್ಲಿ ಗ್ರಾಮದೇವಿ ಪಾದಗಟ್ಟೆ ಆವರಣದಲ್ಲಿ ಬುಧವಾರ ಹಮ್ಮಿಕೊಂಡ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದಿನದಿಂದ ದಿನಕ್ಕೆ ಭೂಮಿಯ ತಾಪಮಾನ ಹೆಚ್ಚಳದಿಂದ ಆನೇಕ ಅವಘಡಗಳು ನಡೆಯುತ್ತಿವೆ. ಪರಿಸರ ಉಳಿದರೆ ಮಾತ್ರ ಮಾನವ ಕುಲ ಬದುಕಲು ಸಾಧ್ಯ ಎಂದರು.
ಅಂತರ ಜಲ ಕುಸಿತ, ಅತಿವೃಷ್ಟಿ, ಅನಾವೃಷ್ಟಿಯಂತಹ ಅನಾಹುತಗಳು ಮಾನವನ ಬದುಕನ್ನು ದುಸ್ತರ ಮಾಡಿವೆ. ಈ ಭಾಗದಿಂದ ಪಶ್ಚಿಮ ಘಟ್ಟ ಆರಂಭವಾಗುತ್ತದೆ. ಇಲ್ಲಯೇ 42 ಡಿಗ್ರಿ ಉಷ್ಠಾಂಶ ವರದಿಯಾಗುತ್ತಿದೆ. ದೆಹಲಿಯಲ್ಲಿ 52 ಡಿಗ್ರಿ ತಲುಪಿದೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಈ ಕುರಿತು ಮುನ್ನೆಚ್ಚರಿಕೆ ವಹಿಸಬೇಕು. ಪರಿಸರ ಸಮತೋಲನ ಕಾಪಾಡಲು ಮುಂದಾಗಬೇಕು ಎಂದರು.
ಹಸಿರು ಮಣಿ ಪರಿಣಾಮ ಭೂಮಿಯ ಒಡಲು ಸುಡುತ್ತಿದೆ. ಕೃಷಿ ಭೂಮಿಯಲ್ಲಿ ಹೆಚ್ಚು ಗಿಡ ಬೆಳೆಸಬೇಕು. ಅಗ್ರೋ ಫಾರೆಸ್ಟ್ ಯೋಜನೆಯಡಿ ಸಸಿ ದೊರೆಯುತ್ತವೆ. ಅದನ್ನು ಪಡೆದುಕೊಂಡು ಹೊಲದ ಬದುವಿನ ಮೇಲೆ ನೆಡಬೇಕು. ಬಾಲ್ಯದಲ್ಲಿಯೇ ಪರಿಸರ ಮಹತ್ವ ಅರಿತುಕೊಳ್ಳಬೇಕು ಎಂದರು.
ಮುಖ್ಯ ಶಿಕ್ಷಕಿ ಸಿಸ್ಟರ್ಜೀನಾ ಪಾಯ್ಸ್ ಮಾತನಾಡಿ, ಉತ್ತಮ ಆರೋಗ್ಯ, ಗಾಳಿ, ಶುದ್ಧ ಹವೆ ಬೇಕಾದಲ್ಲಿ ಹಸಿರು ವಾತಾವರಣ ಸೃಷ್ಟಿಸಬೇಕು. ಹಸಿರು ಪರಿಸರ ಮನಸ್ಸಿಗೆ ಮುದ ನೀಡುವುದರ ಜೊತೆಗೆ ಪ್ರಕೃತಿ ಸೊಬಗನ್ನು ಇಮ್ಮಡಿಕೊಳಿಸುತ್ತದೆ. ಎಲ್ಲರೂ ಸಸಿ ನೆಡಬೇಕು ಎಂದರು.