ಹುಬ್ಬಳ್ಳಿ:ಹಳೆಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಅಮಾಯಕರಿಗೆ ತೊಂದರೆ ಕೊಡಬೇಡಿ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಮನವಿ ಮಾಡಿದರು.
ಇಲ್ಲಿನ ಅಂಜುಮನ್ ಸಂಸ್ಥೆಯ ನೆಹರೂ ಕಾಲೇಜಿಗೆ ಗುರುವಾರ ಭೇಟಿ ನೀಡಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ’ಗಲಭೆಯನ್ನು ನೋಡಲು ಸಾಕಷ್ಟು ಯುವಜನತೆ ಅಲ್ಲಿಗೆ ಬಂದಿದ್ದರು. ಅವರನ್ನು ಕೂಡ ಬಂಧಿಸಲಾಗಿದೆ. ಬಂಧಿತರಿಗೆ ಅಪರಾಧ ಹಿನ್ನೆಲೆಗಳಿದ್ದರೆ ಕ್ರಮ ಕೈಗೊಳ್ಳಲಿ. ಪ್ರಕರಣಗಳು ಇಲ್ಲದಿದ್ದರೆ ಅವರನ್ನು ಪೊಲೀಸರು ಬಿಟ್ಟುಬಿಡಬೇಕು.ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪಿಗಳು ಹಾಗೂ ಕಾಣದ ಕೈಗಳ ಶಕ್ತಿಯನ್ನು ಮಟ್ಟ ಹಾಕುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು‘ಎಂದು ಆಗ್ರಹಿಸಿದರು.
’ದೊಡ್ಡ ಅನಾಹುತ ಆಗುವುದನ್ನು ಪೊಲೀಸರು ತಮ್ಮ ಸಾಮರ್ಥ್ಯದಿಂದ ತಡೆದಿದ್ದಾರೆ. ನಿಜಕ್ಕೂ ಅವರು ಅಭಿನಂದನಾರ್ಹರು. ಗಲಭೆ ಪೂರ್ವನಿಯೋಜಿತವೆಂದು ಗೊತ್ತಿದೆ.ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಸಹಭಾಳ್ವೆಯ ವಾತಾವರಣ ಕಾಪಾಡುವಂತೆ ಮಾಡುವುದು ಎಲ್ಲ ಧರ್ಮಗಳ ಜವಾಬ್ದಾರಿ‘ ಎಂದರು.
’ಕರಾವಳಿ ಭಾಗದಲ್ಲಿಹಲಾಲ್ ಹಾಗೂ ಹಿಜಾಬ್ ವಿಚಾರಗಳನ್ನು ಸರ್ಕಾರ ಆರಂಭದಲ್ಲಿಯೇ ಚಿವುಟಿ ಹಾಕಬೇಕಿತ್ತು. ಆದರೆ, ಸರ್ಕಾರ ತನ್ನಜವಾಬ್ದಾರಿಯನ್ನು ನಿರ್ವಹಿಸಲಿಲ್ಲ. ಡಿಜೆ ಹಳ್ಳಿ, ಕೆಜಿ ಹಳ್ಳಿ ಘಟನೆ ನಡೆಯಲು ಕಾರಣರಾದವರು ಈಗ ಅರಾಮವಾಗಿ ಒಂದು ಪಕ್ಷದ ಮುಖಂಡರ ಜೊತೆಗೆ ಸುತ್ತಾಡುತ್ತಿದ್ದಾರೆ‘ ಎಂದರು.