ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ |ನೇಹಾ, ಅಂಜಲಿಯಂತೆ ಕೊಲೆ ಮಾಡುತ್ತೇವೆ: ಮುಖ್ಯಶಿಕ್ಷಕಿಗೆ ಜೀವ ಬೆದರಿಕೆ

Published 2 ಜೂನ್ 2024, 5:12 IST
Last Updated 2 ಜೂನ್ 2024, 5:12 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಲ್ಲಿನ ಬೆಂಗೇರಿ ಬಳಿ ಇರುವ ರೋಟರಿ ಸ್ಕೂಲ್‌ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ದೀಪಾ ಅಡವಿಮಠ ಅವರಿಗೆ ಪೋಸ್ಟ್‌ನಲ್ಲಿ ಜೀವ ಬೆದರಿಕೆ ಪತ್ರ ಬಂದಿದ್ದು, ಕೇಶ್ವಾಪುರ ಪೊಲೀಸ್‌ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ.

‘ದೀಪಾ, ನಿನ್ನ ಹತ್ಯೆ ನೇಹಾ ಮತ್ತು ಅಂಜಲಿ ಹಾಗೆ ಕೆಲವೇ ದಿನ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಡಿಸಿಪಿ ಕುಶಾಲ ಚೌಕ್ಷಿ, ಉತ್ತರ ವಿಭಾಗದ ಎಸಿಪಿ ಶಿವಪ್ರಕಾಶ ನಾಯ್ಕ, ಕೇಶ್ವಾಪುರ ಠಾಣೆ ಇನ್‌ಸ್ಪೆಕ್ಟರ್‌ ಹಾಗೂ ಸಿಬ್ಬಂದಿ ಸ್ಕೂಲ್‌ಗೆ ಭೇಟಿ ನೀಡಿ ಮುಖ್ಯಶಿಕ್ಷಕಿಯಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸ್ಕೂಲ್‌ ಹಾಗೂ ಶಿಕ್ಷಕಿ ನಿವಾಸದ ಬೆಂಗೇರಿ ಸೀಮನಗೌಡ್ರ ಬಡಾವಣೆ ಸುತ್ತಮುತ್ತ ಬೀಟ್‌ ಸಂಖ್ಯೆ ಹೆಚ್ಚಿಸಲಾಗಿದೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪ್ರಾಚಾರ್ಯೆ ದೀಪಾ, ‘ಮೇ 28ರಂದು ಬೆಳಿಗ್ಗೆ 11.30ಕ್ಕೆ ಮನೆಯ ವಿಳಾಸಕ್ಕೆ ನನ್ನ ಹೆಸರಲ್ಲಿಯೇ ಜೀವ ಬೆದರಿಕೆ ಇರುವ ಪೋಸ್ಟ್‌ ಬಂದಿತ್ತು. ತಕ್ಷಣ ಮನೆಯವರಿಗೆ ಹಾಗೂ ಸಹೋದರ ಶಶಿಕಾಂತ ಬಿಜವಾಡ ಅವರಿಗೆ ಕರೆ ಮಾಡಿ ತಿಳಿಸಿದೆ. ಅವರ ಸಲಹೆಯಂತೆ ಕೇಶ್ವಾಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ’ ಎಂದರು.

‘20 ವರ್ಷಗಳಿಂದ ಇದೇ ಸ್ಕೂಲ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. ಮಕ್ಕಳ ಜೊತೆ ಅನ್ಯೂನ್ಯವಾಗಿಯೇ ಇದ್ದೇನೆ. ನನಗೆ ಯಾರ ಮೇಲೂ ಅನುಮಾನವಿಲ್ಲ. ಕೊಲೆ ಹಾಗೂ ಕೊಲೆ ಬೆದರಿಕೆ ಹಾಕುವಂತವರನ್ನು ಎನ್‌ಕೌಂಟರ್‌ ಮಾಡಿ ಬಿಸಾಡಬೇಕು. ಇಂಥ ಘಟನೆಗಳು ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸುತ್ತವೆ’ ಎಂದರು.

‘ಪ್ರಾಚಾರ್ಯರಿಗೆ ಬಂದ ಜೀವ ಬೆದರಿಕೆ ಪತ್ರ ಹುಬ್ಬಳ್ಳಿಯಿಂದಲೇ ಪೋಸ್ಟ್‌ ಆಗಿದೆ. ಎಲ್ಲಿಂದ, ಯಾರು ಮಾಡಿದ್ದಾರೆ, ಅದರ ಹಿನ್ನೆಲೆ ಏನು ಎನ್ನುವ ಕುರಿತು ತನಿಖೆ ನಡೆಯುತ್ತಿದೆ. ಪತ್ರದ ಕುರಿತು ಪ್ರಾಚಾರ್ಯರನ್ನು ವಿಚಾರಿಸಲಾಗಿದೆ’ ಎಂದು ಎಸಿಪಿ ಶಿವಪ್ರಕಾಶ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT