ಹುಬ್ಬಳ್ಳಿ: ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ ವಿವಿಧೆಡೆ ಬುಧವಾರ ರಾತ್ರಿ ಸುರಿದ ಮಳೆಗೆ 150 ಎಕರೆಗೂ ಅಧಿಕ ಮೆಕ್ಕೆಜೋಳ ಹಾನಿಯಾಗಿದೆ. 12 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ವಿಜಯಪುರ ಜಿಲ್ಲೆಯ ಅಲಮೇಲದಲ್ಲಿ ಹಳ್ಳದ ಸೆಳವಿಗೆ ಸಿಲುಕಿ ರೈತರೊಬ್ಬರು ಭೀಮಾ ನದಿಯಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ.
ಆಲಮೇಲ ತಾಲ್ಲೂಕಿನಲ್ಲಿ ಭಾರಿ ಮಳೆಯಾಗಿದ್ದು, ಹೊಲಕ್ಕೆ ಹೋಗಿದ್ದ ಕುರಬತಹಳ್ಳಿ ಗ್ರಾಮದ ರೈತ ಬಸವಂತರಾಯ ಅಂಬಾಗೋಳ (54) ಸಂಜೆ ಮನೆಗೆ ಬರುವಾಗ ಹಳ್ಳದ ಸೆಳವಿಗೆ ಸಿಲುಕಿ ಕೊಚ್ಚಿ ಹೋಗಿರುವುದಾಗಿ ಅವರ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ ಪತ್ತೆ ಕಾರ್ಯ ನಡೆಸಿದ್ದಾಗಿ ಆಲಮೇಲ ಠಾಣೆಯ ಪಿಎಸ್ಐ ಸುರೇಶ ಗಡ್ಡಿ ತಿಳಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಹಾಗೂ ಅಂಕೋಲಾದಲ್ಲಿ ಧಾರಾಕಾರ ಮಳೆಯಾಗಿದೆ.