ಹುಬ್ಬಳ್ಳಿ: ತಾಲ್ಲೂಕಿನ ಕಿರೇಸೂರ ಗ್ರಾಮದ ಮಲಪ್ರಭಾ ಕಾಲುವೆ ಬಳಿ ಶುಕ್ರವಾರ ಮಧ್ಯಾಹ್ನ ಫೊಟೊ ತೆಗೆಸಿಕೊಳ್ಳುತ್ತಿದ್ದ ಐವರು ಸ್ನೇಹಿತರ ಮೇಲೆ ಹೆಜ್ಜೇನುಗಳು ದಾಳಿ ನಡೆಸಿದ್ದು, ತಪ್ಪಿಸಿಕೊಳ್ಳಲು ಕಾಲುವೆಗೆ ಜಿಗಿದ ಮೂವರು ನೀರು ಪಾಲಾಗಿದ್ದಾರೆ.
ನಗರದ ಗಾಂಧಿವಾಡದ ಮಹಾನಗರ ಪಾಲಿಕೆಯ ಮಾಜಿ ಸದಸ್ಯೆ ಸುವರ್ಣ ಕಲ್ಲಕುಂಟ್ಲಾ ಅವರ ಪುತ್ರ ಸನ್ನಿ ಜಾನ್ಸನ್ ಕಲ್ಲಕುಂಟ್ಲ, ಜೋಶ್ ಕ್ಲೆಮೆಂಟ್ ಹಾಗೂ ಗಜಾನನ ಎ. ಗಜ್ಜು ನೀರು ಪಾಲಾದ ಯುವಕರು.
ಕಾಲುವೆಯಲ್ಲಿ ಸಿಲುಕಿದ್ದ ವಿದ್ಯಾನಗರದ ಸಿಮೆಂಟ್ ಚಾಳಾದ ನತಾಶಾ ಭಂಡಾರಿ ಅವರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಮತ್ತೊಬ್ಬ ಸ್ನೇಹಿತ ನವೀನ್ ಪಾರ್ಕ್ನ ಸಲ್ಮಾನ್ ಸ್ಯಾಮುಯೆಲ್ ಸ್ಥಳದಿಂದ ಓಡಿ ಹೋಗಿ ಹೆಜ್ಜೇನು ದಾಳಿಯಿಂದ ರಕ್ಷಿಸಿಕೊಂಡಿದ್ದಾರೆ.
ಮೂವರಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಮಧ್ಯಾಹ್ನದಿಂದ ಶೋಧ ಕಾರ್ಯ ಆರಂಭಿಸಿದ್ದು, ಇದುವರೆಗೆ ಪತ್ತೆಯಾಗಿಲ್ಲ.