ಹುಬ್ಬಳ್ಳಿ: ನಗರದ ಚನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನದಲ್ಲಿ ರಾಣಿ ಚೆನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳಿಯಿಂದ ಬುಧವಾರ ಬೆಳಿಗ್ಗೆ 7.30ಕ್ಕೆ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.
ಮಹಾಮಂಡಳಿ ಅಧ್ಯಕ್ಷ ಸಂಜೀವ ಬಡಸ್ಕರ ನೇತೃತ್ವದಲ್ಲಿ 4 ಅಡಿ ಎತ್ತರದ ಮೂರ್ತಿಯನ್ನು ಧಾರ್ಮಿಕ ವಿಧಿ ವಿಧಾನಗಳ ಅನುಸಾರ ಪ್ರತಿಷ್ಠಾಪಿಸಲಾಯಿತು. ಸಂಜೆ 7 ಗಂಟೆಗೆ ಮಹಾಮಂಗಳಾರತಿ ನಡೆಯಲಿದೆ.
ಮಂಗಳವಾರ ರಾತ್ರಿ ಹೈಕೋರ್ಟ್ನಿಂದ ಮೂರ್ತಿ ಸ್ಥಾಪನೆಗೆ ಗ್ನೀನ್ ಸಿಗ್ನಲ್ ಸಿಗುತ್ತಿದ್ದಂತೆ, ಸದಸ್ಯರು ರಾತ್ರಿಯೇ ಮೈದಾನದಲ್ಲಿ ಪೆಂಡಾಲ್ ಹಾಕಿ ಗಣೇಶೋತ್ಸವಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಪೆಂಡಾಲ್ ಜಾಗದಲ್ಲಿ ಗೋಮೂತ್ರ ಸಿಂಪಡಿಸಿದ್ದರು. ಮಧ್ಯಾಹ್ನ 3ಕ್ಕೆ ಮೆರವಣಿಯಲ್ಲಿ ಮೂರ್ತಿಯನ್ನು ತಂದು ಪ್ರತಿಷ್ಠಾಪಿಸಲು ನಿರ್ಧರಿಸಿತ್ತು.
ಆದರೆ, ರಾತ್ರಿ ಹೈಕೋರ್ಟ್ ಆದೇಶದ ನಂತರ, ಮಧ್ಯಾಹ್ನದ ಬದಲು ಬೆಳಿಗ್ಗೆಯೇ ಮೂರ್ತಿ ಪ್ರತಿಷ್ಠಾಪನೆಗೆ ಮಹಾಮಂಡಳಿಯವರು. ನಿರ್ಧರಿಸಿದರು. ಸೆ. 2ರವರೆಗೆ ನಡೆಯಲಿರುವ ಗಣೇಶೋತ್ಸವದಲ್ಲಿ ಮೂರು ದಿನವೂ ಪೂಜಾ ಕಾರ್ಯಗಳು ನಡೆಯಲಿವೆ. ಮೂರ್ತಿ ದರ್ಶನಕ್ಕೆ ಸಾರ್ವಜನಿಕರಿಗೆ ಮುಕ್ತ ಅವಕಾಶ ಇರಲಿದೆ.
ಮಹಾನಗರ ಪಾಲಿಕೆ ಸದಸ್ಯ ಹಾಗೂ ಪಾಲಿಕೆ ನೇಮಿಸಿದ್ದ ಸದನ ಸಮಿತಿ ಅಧ್ಯಕ್ಷ ಸಂತೋಷ ಚವ್ಹಾಣ, ಕಿಶನ್ ಬೆಳಗಾವಿ, ಸುಭಾಸಸಿಂಗ್ ಜಮಾದಾರ ಇದ್ದರು.