ಹುಬ್ಬಳ್ಳಿ: ಅವಳಿ ನಗರದಲ್ಲಿ ನಿವೇಶನ ಇಲ್ಲದ ಹಾಗೂ ಸ್ವಂತ ಮನೆ ನಿಲ್ಲದ ಅರ್ಹರನ್ನು ಗುರುತಿಸಿ 10 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡುವ ಉದ್ದೇಶ ಇದೆ ಎಂದು ಹುಬ್ಬಳ್ಳಿ–ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರ್ಗಿ ಭರವಸೆ ನೀಡಿದರು.
ನವನಗರದಲ್ಲಿರುವ ಪ್ರಾಧಿಕಾರದ(ಹುಡಾ) ಕಚೇರಿಯಲ್ಲಿ ಶುಕ್ರವಾರ ಅಧಿಕಾರ ಸ್ವೀಕರಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಆರೇಳು ವರ್ಷಗಳಿಂದ ಪ್ರಾಧಿಕಾರದಿಂದ ನಿವೇಶನ ಹಂಚಿಕೆಯಾಗಿಲ್ಲ. ವಿವಿಧ ಯೋಜನೆಗಳಲ್ಲಿ ನಿವೇಶನ ಹಂಚಿಕೆಗೆ ಆದ್ಯತೆ ನೀಡಲಾಗುವುದು ಎಂದರು.
ಸಿಎ ಸೈಟ್ ಹಂಚಿಕೆ:ಲಕಮನಹಳ್ಳಿ, ತಡಸಿನಕೊಪ್ಪ ಮತ್ತು ಅಮರಗೋಳದಲ್ಲಿ ಇರುವ ಪ್ರಾಧಿಕಾರದ ಬಡಾವಣೆಯಲ್ಲಿ ಹಂಚಿಕೆಯಾಗದೇ ಉಳಿದಿರುವ ಸುಮಾರು 700 ನಿವೇಶನಗಳನ್ನು ಶೀಘ್ರದಲ್ಲೇ ಹಂಚಿಕೆ ಮಾಡಲಾಗುವುದು. ಸಿಎ ಸೈಟ್ಗಳನ್ನು(ನಾಗರಿಕ ನಿವೇಶನಗಳು) ಅರ್ಹ ಸಂಘ, ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗುವುದು ಎಂದು ಹೇಳಿದರು.
ಗುಂಪು ಮನೆಗಳ ಯೋಜನೆ:ಪ್ರಾಧಿಕಾರಕ್ಕೆ ಸೇರಿದ ನಿವೇಶನದಲ್ಲಿ ಗುಂಪು ಮನೆಗಳ ಯೋಜನೆಯಡಿ ಮನೆ ನಿರ್ಮಿಸಿ, ಬಡವರಿಗೆ ಹಂಚಿಕೆ ಮಾಡುವ ಸಂಬಂಧ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು. ಪ್ರಾಧಿಕಾರದಿಂದ ಹೊಸ ಬಡಾವಣೆಗಳನ್ನು ನಿರ್ಮಿಸಲು ಭೂಮಿ ಅಗತ್ಯವಿದೆ. ಈಗಾಗಲೇ ಹಲವು ರೈತರು ಭೂಮಿ ನೀಡಲು ಮುಂದೆ ಬಂದಿದ್ದಾರೆ. ಅಂತಹ ರೈತರ ಜೊತೆ ಶೀಘ್ರದಲ್ಲೇ ಮಾತುಕತೆ ನಡೆಸಲಾಗುವುದು ಎಂದು ಹೇಳಿದರು.
ಅಕ್ರಮಕ್ಕೆ ಕಡಿವಾಣ:ಅವಳಿ ನಗರದಲ್ಲಿ ಅಕ್ರಮ ಲೇಔಟ್ ಸಮಸ್ಯೆ ತೀವ್ರವಾಗಿದೆ. ಇದಕ್ಕೆ ಕಡಿವಾಣ ಹಾಕುವ ಸಂಬಂಧ ಅಧಿಕಾರಿಗಳ ತಂಡವನ್ನು ರಚನೆ ಮಾಡಲಾಗುವುದು. ಇನ್ನು ಮುಂದೆ ಅಕ್ರಮ ಬಡಾವಣೆಗಳು ತಲೆ ಎತ್ತದಂತೆ ಕ್ರಮಕೈಗೊಳ್ಳಲಾಗುವುದು. ಖಾಸಗಿ ಬಡಾವಣೆಗಳಲ್ಲಿ ನಿವೇಶನ ಖರೀದಿಸುವವರು ಎಚ್ಚರ ವಹಿಸಬೇಕು ಎಂದರು.
ಅಭಿನಂದನೆ:ಸಚಿವ ಜಗದೀಶ ಶೆಟ್ಟರ್, ಹುಡಾ ಆಯುಕ್ತ ಎನ್.ಎಚ್.ಕುಮ್ಮಣ್ಣವರ, ಮಾಜಿ ಶಾಸಕ ಅಶೋಕ ಕಾವಟೆ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಎಸ್ಎಸ್ಕೆ ಸಮಾಜದಿಂದ ಕಲಬುರ್ಗಿ ಅವರನ್ನು ಅಭಿನಂದಿಸಿದರು.