ಧಾರವಾಡ: ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಇಬ್ಬರನ್ನು ಬಂಧಿಸಲು ಮುಂದಾದ ಪೊಲೀಸರ ಮೇಲೆ ಅವರು ಗುರುವಾರ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ. ಇವರಲ್ಲಿ ಒಬ್ಬನನ್ನು ಬಂಧಿಸಲಾಗಿದೆ.
ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಎರಡು ಕಳ್ಳತನ ಪ್ರಕರಣಗಳಲ್ಲಿ ಇರಾನಿ ಗ್ಯಾಂಗಿಗೆ ಸೇರಿದ ಆರು ಜನರ ಕೈವಾಡ ಇರುವ ಶಂಕೆಯ ಮೇಲೆ ಅಲ್ಲಿನ ಪೊಲೀಸರು ನಗರಕ್ಕೆ ಬಂದಿದ್ದರು. ಪಿಎಸ್ಐಗಳಾದ ಸಂತೋಷ್ ಹಾಗೂ ರವಿಕುಮಾರ್ ನೇತೃತ್ವದ ತಂಡ ನಗರದಲ್ಲಿ ಆರೋಪಿಗಳಿಗಾಗಿ ಬಲೆ ಬೀಸಿತ್ತು.
ಇಲ್ಲಿನ ಸಂಗಮ್ ವೃತ್ತದ ಬಳಿ ಆರೋಪಿಗಳು ಬರುತ್ತಾರೆ ಎಂಬಖಚಿತ ಮಾಹಿತಿ ಮೇರೆಗೆ ಪೊಲೀಸರು ಮಧ್ಯಾಹ್ನ ಹೊಂಚು ಹಾಕಿ ಕೂತಿದ್ದರು. ನಿರೀಕ್ಷೆಯಂತೆ ಬಂದ ಇಬ್ಬರನ್ನು ಹಿಡಿಯಲು ಮುಂದಾದ ಪೊಲೀಸರ ಮೇಲೆ ಆರೋಪಿಗಳು ಬಿಯರ್ ಬಾಟಲಿಯಿಂದ ದಾಳಿ ಮಾಡಿದರು. ಇದರಿಂದ ಸಂತೋಷ್ ಸೇರಿದಂತೆ ಇತರ ಇಬ್ಬರಿಗೆ ಗಾಯಗಳಾಗಿವೆ.
ಹಲ್ಲೆ ನಡೆಸಿದ ಒಬ್ಬ ಪರಾರಿಯಾದರೆ, ಬಿಲಾಲ್ ತಾನೇ ಬಾಟಲಿಯಿಂದ ಚುಚ್ಚಿಕೊಂಡನು. ಈತನನ್ನು ಪೊಲೀಸರು ಬಂಧಿಸಿದ್ದಾರೆ. ಗಾಯಗೊಂಡ ಪೊಲೀಸರನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.