ಹುಬ್ಬಳ್ಳಿ: ಲೋಕ ಕಲ್ಯಾಣಾರ್ಥವಾಗಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಆ. 21ರಿಂದ 25ರ ವರೆಗೆ ನಗರದ ಕಾಳಮ್ಮನ ಅಗಸಿಯಲ್ಲಿರುವ ಶಂಕರ ಮಠದಲ್ಲಿ ಕಾಮಿತಾರ್ಥ ಮಹಾಯಾಗ ಜರುಗಲಿದೆ.
ಯಾಗದ ಸಂಚಾಲಕ ಡಾ. ಪವನ ವಿ. ಜೋಶಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘21ರಂದು ಪರಶುರಾಮ ಮಹಾಯಾಗ, 22ರಂದು ಭಾಗವತದ ದಶಮಸ್ಕಂದ ಹವನದ ಪೂರ್ವ ಭಾಗ, 23ರಂದು ಮಧ್ಯ, 24ರಂದು ಅಂತಿಮ ಭಾಗ ಮತ್ತು 25ರಂದು ಗೋಪಾಲ ಹವನ ಜರುಗಲಿದೆ. ಈ ವೇಳೆ ವಿಷ್ಣು ಅವತಾರದ ಇತಿಹಾಸ ತಿಳಿಸಿಕೊಡಲಾಗುತ್ತದೆ. ಪ್ರತಿದಿನ ಬೆಳಿಗ್ಗೆ 8.45ಕ್ಕೆ ಕಾರ್ಯಕ್ರಮ ಆರಂಭವಾಗಲಿವೆ’ ಎಂದರು.
‘ಐದೂ ದಿನ ಗೋ ನಿವಾಸ, ಗೋಪೂಜೆ ಸೇವೆ ನಡೆಯುತ್ತದೆ. ಗೋವಿನ ಬಗ್ಗೆ ಜಾಗೃತಿ ಮೂಡಿಸುವುದು, ಲೋಕ ಕಲ್ಯಾಣ ಬಯಸುವುದು ಯಾಗದ ಉದ್ದೇಶ’ ಎಂದರು.
ಧಾರವಾಡ ಜಿಲ್ಲಾ ಬ್ರಾಹ್ಮಣ ಸೇವಾ ಸಂಘ, ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ, ಶಂಕರ ಮಂದಿರ ಸಮಿತಿ, ಗೋಕುಲ ರೋಡ್ ಬ್ರಾಹ್ಮಣ ಸಂಘ ಮತ್ತು ರಾಮಣ್ಣ ಢವಳಗಿ ಗೋ ಸಂಘ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಜರುಗಲಿದೆ.
ಧಾರವಾಡ ಜಿಲ್ಲಾ ಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಎಂ.ಬಿ.ನಾತು, ಶಂಕರ ಸಮಿತಿ ಸದಸ್ಯರಾದ ಶಂಕರ ಪಾಟೀಲ, ಸಂಜೀವ ಜೋಶಿ, ಡಾ. ಬಿ.ಬಿ. ಪಾಟೀಲ, ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್. ಪುರೋಹಿತ, ಗೋ ಸಂಘ ಟ್ರಸ್ಟ್ ಅಧ್ಯಕ್ಷ ರಾಮಣ್ಣ ಢವಳಗಿ ಇದ್ದರು.