ಹುಬ್ಬಳ್ಳಿ: ‘ಅಭಿವೃದ್ಧಿಗೆ ಇನ್ನೊಂದು ಹೆಸರೇ ಪ್ರಸಾದ ಅಬ್ಬಯ್ಯ. ಅವರು ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ನೇಮಕಗೊಂಡಿದ್ದು ಸಂತಸದ ಸಂಗತಿ. ಫೆ.24 ರಂದು ರಾಜ್ಯದಾದ್ಯಂತ ಒಟ್ಟು 36 ಸಾವಿರ ಮನೆಗಳನ್ನು ಅವರೊಂದಿಗೆ ಲೋಕಾರ್ಪಣೆ ಮಾಡಲಾಗುವುದು’ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಏರ್ಪಡಿಸಿದ್ದ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ ಅವರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ 2,800 ಕೊಳೆಗೇರಿಗಳಿವೆ. ಇಲ್ಲಿ ಶೇ 90ರಷ್ಟು ಪರಿಶಿಷ್ಟ ಜಾತಿ, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ಮನೆಗಳ ನಿರ್ಮಾಣಕ್ಕೆ ₹500 ಕೋಟಿ ಅನುದಾನ ಬಿಡುಗಡೆ ಮಾಡಿದೆ ಎಂದು ಹೇಳಿದರು.
ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಮಾತನಾಡಿ, ‘ದೀನ ದಲಿತರ ಸಬಲೀಕರಣ, ಅಭಿವೃದ್ಧಿಯೇ ನನ್ನ ಮೂಲ ಮಂತ್ರ. ರಾಜ್ಯದ ಕೊಳೆಗೇರಿಗಳಿಗೆ ಹೈಟೆಕ್ ಸ್ಪರ್ಶ ನೀಡುವ ಮೂಲಕ ರಾಜ್ಯವನ್ನು ಕೊಳೆಗೇರಿ ಮುಕ್ತ ಮಾಡುವ ಗುರಿ ಇದೆ’ ಎಂದು ಹೇಳಿದರು.
ಪ್ರಮುಖರಾದ ರವಿ ಬೋಸರಾಜು, ಪ್ರೊ.ಸದಾಶಿವ ಮರ್ಜಿ, ಡಾ. ಸುಭಾಷ ನಾಟೇಕರ್, ಸುರೇಶ ತಳವಾರ, ಮಹಾವೀರ ಮೋಹಿತೆ, ಮಲ್ಲಿಕಾರ್ಜುನ ರಾಜಸಿಂಗೆ, ಲಕ್ಷ್ಮಿ ದೊಡ್ಡಬಳ್ಳಾಪುರ, ಪರಮೇಶ್ವ ಕಾಳೆ, ಬಸವರಾಜ ಕಡೆಮನಿ ಇದ್ದರು.
ಫಲಾನುಭವಿಗಳಿಗೆ ಅನುಕೂಲ
ಒಂದು ಮನೆ ನಿರ್ಮಾಣಕ್ಕೆ ₹7.50 ಲಕ್ಷ ಅಗತ್ಯ ಇದೆ. ಇದರಲ್ಲಿ ಕೇಂದ್ರ ಸರ್ಕಾರ ₹1.50 ಲಕ್ಷ ಮಾತ್ರ ನೀಡುತ್ತದೆ. ರಾಜ್ಯ ಸರ್ಕಾರ ಸಾಮಾನ್ಯರಿಗೆ ₹1.20 ಲಕ್ಷ ಮತ್ತು ದಲಿತರಿಗೆ 2 ಲಕ್ಷ ಸಹಾಯಧನ ನೀಡುತ್ತಿತ್ತು. ಇನ್ನುಳಿದ ₹4 ಲಕ್ಷವನ್ನು ಫಲಾನುಭವಿಗಳೇ ಭರಿಸಬೇಕಿತ್ತು. ಆದರೆ ಬಡವರ ಮೇಲಿನ ಹೊರೆ ತಗ್ಗಿಸಲು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ₹5 ಲಕ್ಷ ರಾಜ್ಯ ಸರ್ಕಾರದಿಂದ ಭರಿಸಲು ನಿರ್ಧರಿಸಿದ್ದು ಫಲಾನುಭವಿ ಕೇವಲ ₹1 ಲಕ್ಷ ಮಾತ್ರ ಭರಿಸುವಂತೆ ಯೋಜನೆ ರೂಪಿಸಲಾಗಿದೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.