ಧಾರವಾಡ: ‘ಕಾರಾಗೃಹಗಳಿಗೆ ಅಗತ್ಯವಿರುವ ಆಧುನಿಕ ತಾಂತ್ರಿಕ ಉಪಕರಣ ಹಾಗೂ ಸಿಬ್ಬಂದಿ ಸೇರಿದಂತೆ ಎಲ್ಲ ಮೂಲ ಸೌಕರ್ಯ ಕಲ್ಪಿಸಲು ಆದ್ಯತೆ ನೀಡಲಾಗಿದೆ’ ಎಂದು ಎಡಿಜಿಪಿ ಮತ್ತು ಕರ್ನಾಟಕ ಕಾರಾಗೃಹಗಳ ಮಾಹಾನಿರೀಕ್ಷಕ ಎನ್.ಎಸ್. ಮೇಘರಿಖ್ ಹೇಳಿದರು.
ಪೊಲೀಸ್ ತರಬೇತಿ ಶಾಲೆ ಹಾಗೂ ಕರ್ನಾಟಕ ಕಾರಾಗೃಹ ಇಲಾಖೆ ಶನಿವಾರ ಆಯೋಜಿಸಿದ್ದ 21ನೇ ತಂಡದ ಹಾಗೂ ಒಂದನೇ ಕಾರಾಗೃಹ ಮಹಿಳಾ ವೀಕ್ಷಕ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.
‘ರಾಜ್ಯದಲ್ಲಿರುವ ಜೈಲುಗಳ ಸುಧಾರಣೆಗೆ ಮೊದಲ ಹೆಜ್ಜೆಯಾಗಿ ಅಗತ್ಯ ಸಿಬ್ಬಂದಿಗಳ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ.ಇಲಾಖೆಗೆ ಶಿಸ್ತು ಮುಖ್ಯ, ಪ್ರತಿ ಸಿಬ್ಬಂದಿ ಮತ್ತು ಜೈಲು ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಮತ್ತು ಬುನಾದಿ ತರಬೇತಿಯಲ್ಲಿ ನೀಡಿದ ವಿವಿಧ ವಿಷಯಗಳ ಜ್ಞಾನವನ್ನು ಅಳವಡಿಸಿಕೊಂಡು ಶಿಸ್ತು ರೂಢಿಸಿಕೊಳ್ಳಬೇಕು’ ಎಂದರು.
ಕಾರಾಗೃಹ ಇಲಾಖೆ ಐಜಿಪಿ ಎಚ್.ಎಸ್. ರೇವಣ್ಣ ಮಾತನಾಡಿ, ‘ಇಲಾಖೆಯಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಗಳ ನೇಮಕಾತಿ ಸೇರಿದಂತೆ ಎಲ್ಲ ಕಾರ್ಯಗಳಲ್ಲೂ ಪಾರದರ್ಶಕತೆ ಕಾಯ್ದುಕೊಳ್ಳಲಾಗಿದೆ. ₹1.30 ಲಕ್ಷ ವೆಚ್ಚದಲ್ಲಿ ಬಂಧಿಖಾನೆಗಳಿಗೆ ಸುರಕ್ಷತಾ ತಾಂತ್ರಿಕತೆ ಅಳವಡಿಸಲಾಗಿದೆ. ಬೆಂಗಳೂರು ಕೇಂದ್ರ ಕಾರಾಗೃಹ ಆವರಣದಲ್ಲಿ ಇನ್ನೂ ಎರಡು ಪ್ರತ್ಯೇಕ ಬಂಧಿಖಾನೆಗಳನ್ನು ಕಟ್ಟಲಾಗುತ್ತಿದೆ.ರಾಜ್ಯ ಸರ್ಕಾರ ಪ್ರಸಕ್ತ ಸಾಲಿಗೆ ಮತ್ತು 5 ಹೊಸ ಬಂಧಿಖಾನೆಗಳನ್ನು ನಿರ್ಮಿಸಲು ಅನುಮೋದನೆ ನೀಡಿದ್ದು, ಶೀಘ್ರದಲ್ಲಿ ಕಾಮಗಾರಿ ಆರಂಭಿಸಲಾಗುವುದು’ ಎಂದರು.
ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ ಶಾಲೆಯ ವರದಿ ಓದಿದರು. ಪರೇಡ್ ಕಮಾಂಡರ್ ಡಿ.ಎ.ಆರ್.ನ ಡಿ.ಎಸ್.ಪಿ. ಹರೀಶಚಂದ್ರ ನಾಯ್ಕ ಹಾಗೂ ಡಿ.ಎ.ಆರ್ನ ಆರ್.ಎಸ್.ಐ ರಾಜು ಗುಡನಟ್ಟಿ ನೇತೃತ್ವದಲ್ಲಿ ಪ್ರಶಿಕ್ಷಣಾರ್ಥಿಗಳು ಪರೇಡ್ ಮೂಲಕ ಗೌರವ ವಂದನೆ ಸಲ್ಲಿಸಿದರು.
ಧಾರವಾಡ ಹಾಗೂ ಗದಗ ಪೊಲೀಸ್ ವಾದ್ಯ ಮೇಳದ ಕಮಾಂಡರ್ ಐ.ಸಿ. ಡಿಸೋಜಾ ಹಾಗೂ ಜಿ.ಕೆ. ಖಾಜಿ ನೇತೃತ್ವದಲ್ಲಿ ಪೊಲೀಸ್ ವಾದ್ಯ ಮೇಳ ತಂಡದ ಸದಸ್ಯರು ಸುಶ್ರಾವ್ಯವಾಗಿ ವಾದ್ಯ ನುಡಿಸಿದರು.
ಬೆಳಗಾವಿ ಉತ್ತರವಲಯದ ಐಜಿಪಿ ರಾಘವೇಂದ್ರ ಸುಹಾಸ್, ಹುಬ್ಬಳ್ಳಿ–ಧಾರವಾಡ ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ, ಕೇಂದ್ರ ಕಾರಾಗೃಹದ ಸೂಪರಿಂಟೆಂಡೆಂಟ್ ಡಾ. ಆರ್. ಅನಿತಾ, ಡಾ. ಎ.ಸಿ. ಅಲ್ಲಯ್ಯನಮಠ,ಡಿವೈಎಸ್ಪಿ ರಾಮನಗೌಡ ಹಟ್ಟಿ, ಗುರು ಮತ್ತೂರ, ಡಿ.ಎಲ್. ನಾಗೇಶ ಇದ್ದರು.