ಹುಬ್ಬಳ್ಳಿ: ಪ್ರೊ. ಚಂದ್ರಶೇಖರ ಪಾಟೀಲ ಸೇರಿದಂತೆ ಕನ್ನಡಪರ ಹೋರಾಟಗಾರರ ಹಾಗೂ ಸಾಹಿತಿಗಳ ಪುತ್ಥಳಿಯನ್ನು ಕರ್ನಾಟಕ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಸ್ಥಾಪಿಸಲಿ ಎಂದು ಚಿಂತನ ವೇದಿಕೆಯ ಅಧ್ಯಕ್ಷ ಕೃಷ್ಣಮೂರ್ತಿ ಕುಲಕರ್ಣಿ ಹೇಳಿದರು.
ಉಣಕಲ್ನ ಶಿವಗಿರಿಯಲ್ಲಿ ಸೋಮವಾರ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಹಾಗೂ ಚಿಂತನ ವೇದಿಕೆ ವತಿಯಿಂದ ಚಂದ್ರಶೇಖರ ಪಾಟೀಲ ಅವರ ನಿಧನದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಸಂತಾಪ ಸಭೆಯಲ್ಲಿ ಅವರು ಮಾತನಾಡಿದರು.
ಜಾನಪದ ಕಲಾವಿದ ಬಸವಲಿಂಗಯ್ಯ ಹಿರೇಮಠ ಹಾಗೂ ಪ್ರೊ. ಚಂದ್ರಶೇಖರ ಪಾಟೀಲ ಅವರ ನಿಧನ ಕನ್ನಡ ನಾಡಿಗೆ ನಷ್ಟವುಂಟುಮಾಡಿದೆ. ಕನ್ನಡ ನಾಡು ನುಡಿ ವಿಚಾರದಲ್ಲಿ ದುಡಿದು ಮಡಿದ ಕವಿ, ಕಲಾವಿದರಿಗೆ ಗೌರವ ನೀಡುವ ಕಾರ್ಯ ನಡೆಯಬೇಕಿದೆ ಎಂದರು.
ಚನ್ನಬಸಪ್ಪ ಧಾರವಾಡಶೆಟ್ಟರ್ ಅಧ್ಯಕ್ಷತೆ ವಹಿಸಿದ್ದರು. ಅನಂತ ಕುಲಕರ್ಣಿ, ಎಸ್.ಐ. ನೇಕಾರ, ಆರ್.ಎಸ್. ವೈದ್ಯ, ಪದ್ಮಜಾ ಉಮರ್ಜಿ, ರಾಮಚಂದ್ರ ಪೂಜಾರ, ಶಶಿಧರ ವಿರಕ್ತಮಠ ಇದ್ದರು.
ಹುಬ್ಬಳ್ಳಿ ವಕೀಲರ ಸಂಘ: ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ, ನಿವೃತ್ತ ನ್ಯಾಯಮೂರ್ತಿ ಎಂ.ಎಂ. ಮಿರಧೆ, ವಕೀಲ ಆರ್.ಆರ್. ಮೀರಖಾನ್ ಅವರ ನಿಧನಕ್ಕೆ ಹುಬ್ಬಳ್ಳಿ ವಕೀಲರ ಸಂಘ ಹೊಸೂರು ಕೋರ್ಟ್ನ ವಕೀಲರ ಭವನದಲ್ಲಿ ಸೋಮವಾರ ಶ್ರದ್ಧಾಂಜಲಿ ಸಭೆ ನಡೆಸಿತು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸಿ.ಆರ್. ಪಾಟೀಲ, ಚಂದ್ರಶೇಖರ ಪಾಟೀಲರ ಬರಹ, ಬದುಕು ಕುರಿತು ಮಾತನಾಡಿದರು. ವಕೀಲರಾದ ಡಿ.ಎಂ. ನರಗುಂದ, ಎ.ಸಿ. ನವಲೂರ, ಪಿ.ಎಸ್. ನರೇಗಲ್ಲ ಹಾಗೂ ಐ.ಕೆ. ಬೆಳಗಲಿ ನುಡಿನಮನ ಸಲ್ಲಿಸಿದರು.