ಹುಬ್ಬಳ್ಳಿ: ಮಹಾತ್ಮ ಗಾಂಧೀಜಿ ಅವರ ಪುಣ್ಯತಿಥಿ ಅಂಗವಾಗಿ ನಗರದ ವಿವಿಧೆಡೆ ಸೋಮವಾರ ಹುತಾತ್ಮ ದಿನವನ್ನು ಆಚರಿಸಲಾಯಿತು. ಗಣ್ಯರು ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು. ಬದುಕು, ಸಂದೇಶ ಹಾಗೂ ತತ್ವಾದರ್ಶಗಳನ್ನು ಗಣ್ಯರು ಮೆಲುಕಿ ಹಾಕಿದರು. ‘ರಘುಪತಿ ರಾಘವ ರಾಜಾರಾಮ್...’, ‘ವೈಷ್ಣವ ಜನತೋ...’ ಸೇರಿದಂತೆ ವಿವಿಧ ದೇಶಭಕ್ತಿ ಗೀತೆಗಳು ಅನುರಣಿಸಿದವು.
ಪುಣ್ಯತಿಥಿ ಅಂಗವಾಗಿ ಕಿಮ್ಸ್ ಆಸ್ಪತ್ರೆ ಬಳಿ ಇರುವ ಗಾಂಧೀಜಿ ಪ್ರತಿಮೆ ಹಾಗೂ ಆವರಣವನ್ನು ಹೂವು ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಲಾಯಿತು. ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳ ಸದಸ್ಯರು ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು.
ಮಹಾನಗರ ಪಾಲಿಕೆ ವತಿಯಿಂದ ಕಿಮ್ಸ್ ದ್ವಾರದ ಬಳಿಯ ಗಾಂಧೀಜಿ ಪ್ರತಿಮೆಗೆ ಉಪ ಮೇಯರ್ ಉಮಾ ಮುಕುಂದ ಹಾಗೂ ವಿರೋಧ ಪಕ್ಷದ ನಾಯಕ ದೊರೈರಾಜ್ ಮಣಿಕುಂಟ್ಲ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಪಾಲಿಕೆ ಸದಸ್ಯರಾದ ರೂಪಾ ಶೆಟ್ಟಿ, ಹೆಚ್ಚುವರಿ ಆಯುಕ್ತ ಶಂಕರಾನಂದ ಬನಶಂಕರಿ, ಮುಖ್ಯ ಲೆಕ್ಕಾಧಿಕಾರಿ ಸತೀಶ ನರಗಟ್ಟಿ, ವಲಯ ಸಹಾಯಕ ಆಯುಕ್ತ ಎಸ್.ಸಿ. ಬೇವೂರ ಹಾಗೂ ಕಾರ್ಯನಿರ್ವಾಹಕ ಎಂಜಿನಿಯರ್ ಮಂಜುನಾಥ ಚವ್ಹಾಣ ಇದ್ದರು.
ಅಮನ್ ಫೌಂಡೇಷನ್: ವಾರ್ಡ್ 30ರ ಗಾಂಧಿನಗರದಲ್ಲಿ ಅಮನ್ ಫೌಂಡೇಷನ್ನಿಂದ ಹುತಾತ್ಮ ದಿನವನ್ನು ಆಚರಿಸಲಾಯಿತು. ಫೌಂಡೇಷನ್ ಅಧ್ಯಕ್ಷ ನವೀದ್ ಮುಲ್ಲಾ ಅವರು ಮಹಾತ್ಮನ ಮೂರ್ತಿಗೆ ಮಾಲಾರ್ಪಣೆ ಮಾಡಿದರು.
ಬಳಿಕ ಮಾತನಾಡಿದ ಅವರು, ‘ಗಾಂಧೀಜಿ ಅವರ ಸಂದೇಶ ಹಾಗೂ ತತ್ವಾದರ್ಶ ಸಾರ್ವಕಾಲಿಕವಾಗಿವೆ. ಅಹಿಂಸೆ, ಸತ್ಯ ಹಾಗೂ ಸರಳತೆಯನ್ನು ಬೋಧಿಸಿ, ಅದರಂತೆ ಬದುಕಿದ ಗಾಂಧೀಜಿ ಅವರು ಎಲ್ಲರಿಗೂ ಪ್ರೇರಣೆಯಾಗಬೇಕು. ಅವರ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಂಡಾಗ ಬದುಕಷ್ಟೇ ಅಲ್ಲದೆ, ಸಮಾಜವು ಅತ್ಯಂತ ಶಾಂತಿಯಿಂದ ಇರುತ್ತದೆ’ ಎಂದರು.
ಫೌಂಡೇಷನ್ ಪ್ರಧಾನ ಕಾರ್ಯದರ್ಶಿ ರಫೀಕ ಚವ್ಹಾಣ, ಯುವ ಮುಖಂಡರಾದ ಜಗದೀಶ್ ಗಾಣದಾಳ, ಸಿದ್ಧೇಶ್ವರ ಕಾರದಕಟ್ಟಿ, ಸುಲೇಮಾನ ಹಸೂಭಾಯಿ, ಮಂಜುನಾಥ ಶಾವಿ, ವೀರೇಶ ಗೆಜ್ಜಲಗಟ್ಟಿ, ಜಮೀರ ಹುಡೇದ ಇದ್ದರು.
ಹೊರಕೇರಿ ಪ್ರತಿಷ್ಠಾನ: ಹೊರಕೇರಿ ಮಾಸ್ತರ ಪ್ರತಿಷ್ಠಾನ ಮತ್ತು ಬಸವ ಪರಿಸರ ಸಂರಕ್ಷಣಾ ಸಮಿತಿಯಿಂದ ಕಿಮ್ಸ್ ಬಳಿಯ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸೂಚಿಸಲಾಯಿತು. ಕಾಂಗ್ರೆಸ್ ಮುಖಂಡ ಸದಾನಂದ ಡಂಗನವರ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಚನ್ನಬಸಪ್ಪ ಧಾರವಾಡಶೆಟ್ರ, ಆನಂದ ಘಟಪನದಿ ಹಾಗೂ ಡಾ. ಬಸವಕುಮಾರ ತಲವಾಯಿ ಇದ್ದರು.