ಹುಬ್ಬಳ್ಳಿ: ಹುಬ್ಬಳ್ಳಿ– ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಮಂಗಳವಾರ ಕ್ಷೇತ್ರದ ವಾರ್ಡ್ ಸಂಖ್ಯೆ 51, 52 ಮತ್ತು 53 ರ ಜಗದೀಶ ನಗರ, ಮಾರುತಿ ನಗರ, ನ್ಯೂ ಆನಂದ ನಗರದ ಕೊಳಗೇರಿ ನಿವಾಸಿಗಳೊಂದಿಗೆ ಜನ ಸಂಪರ್ಕ ಸಭೆ ನಡೆಸಿದರು.
ಹಲವು ವರ್ಷಗಳಿಂದ ಮೂಲಸೌಕರ್ಯಗಳಿಂದ ವಂಚಿತರಾಗಿದ್ದು, ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ನಿವಾಸಿಗಳು ಒತ್ತಾಯಿಸಿದರು.
ವಾರ್ಡ್ ಸಂಖ್ಯೆ 52ರ ಮಾರುತಿ ನಗರದ ಕೊಳೆಗೇರಿಯಲ್ಲಿ 30 ವರ್ಷಗಳಿಂದ ವಾಸಿಸುತ್ತಿರುವ 820 ಮನೆಗಳಿಗೆ ಪಟ್ಟಾ ಮತ್ತು ಹಕ್ಕು ಪತ್ರ ನೀಡಬೇಕಾಗಿದೆ. ಪರಿಶಿಷ್ಟ ಜಾತಿಯವರಿಗೆ ಶೇ 10 ಮತ್ತು ಸಾಮಾನ್ಯ ಜನರಿಗೆ ಶೇಕಡ ಶೇ 15 ಸೇರಿದಂತೆ ಒಟ್ಟು 350 ಮನೆಗಳನ್ನು ನಿರ್ಮಿಸಲಾಗುವುದು ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಜಗದೀಶ ನಗರದಲ್ಲಿ 210 ಮನೆಗಳನ್ನು ನಿರ್ಮಿಸಲಾಗುತ್ತಿದೆ. ಶಿವಪುತ್ರ ನಗರದಲ್ಲಿ 230, ನ್ಯೂ ಆನಂದ ನಗರದಲ್ಲಿ 835 ಮನೆಗಳನ್ನು ನಿರ್ಮಿಸಬೇಕಿದ್ದು, ಅದರ ಜತೆಗೆ ಮೂಲಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.