ಹುಬ್ಬಳ್ಳಿ: ‘ಮಣಿಪುರದಲ್ಲಿ ಕ್ರೈಸ್ತ ಸಮುದಾಯದವರ ಮೇಲೆ ದೌರ್ಜನ್ಯ ನಡೆಯುತ್ತಿದ್ದು, ಅಲ್ಲಿಯ ಸರ್ಕಾರ ಅವರಿಗೆ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿ ಯುನೈಟೆಡ್ ಧಾರವಾಡ ಜಿಲ್ಲಾ ಕ್ರಿಶ್ಚಿಯನ್ ಫಾಸ್ಟರ್ಸ್ ಹಾಗೂ ಲೀಡರ್ಸ್ ಅಲೈನ್ಸ್ ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿದರು.
ಇಲ್ಲಿಯ ಸ್ಟೇಷನ್ ರಸ್ತೆಯ ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಮಿನಿವಿಧಾನ ಸೌಧದವರೆಗೂ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಮಣಿಪುರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
‘ಮಣಿಪುರದಲ್ಲಿ ನಡೆದ ಅತ್ಯಾಚಾರ, ಹಿಂಸಾಚಾರದ ಘಟನೆ ಕುರಿತು ಅಲ್ಲಿನ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಕಾನೂನು ಕ್ರಮಕೈಗೊಳ್ಳುತ್ತಿಲ್ಲ. ಗಲಭೆಯಲ್ಲಿ ಮಹಿಳೆಯರ ಹಾಗೂ ಕ್ರೈಸ್ತ ಸಮುದಾಯದವರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಕೂಡಲೇ ಸರ್ಕಾರಿ ಅವರಿಗೆ ರಕ್ಷಣೆ ನೀಡಬೇಕು‘ ಎಂದು ಆಗ್ರಹಿಸಿದರು.
ಪಾಲಿಕೆ ಸದಸ್ಯ ದೊರೆರಾಜ ಮಣಿಕುಂಟ್ಲಾ, ಸುಧಾ ಮಣಿಕುಂಟ್ಲಾ ಹಾಗೂ ಸುನೀಲ ಮಹಡೆ, ಕ್ರೈಸ್ತ ಸಮುದಾಯದ ಜಿಲ್ಲಾ ಅಧ್ಯಕ್ಷ ಶೆಟ್ರಾಕ್ ಇದ್ದರು.