ನವಲಗುಂದ: ತಾಲ್ಲೂಕಿನ ತುಪ್ಪದಕುರಹಟ್ಟಿ ಗ್ರಾಮದಲ್ಲಿ ₹25 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಜುಮ್ಮಾ ಮಸೀದಿಯನ್ನು ಶಾಸಕ ಎನ್.ಎಚ್.ಕೋನರಡ್ಡಿ, ವಾಗೀಶ ಪಂಡಿತಾರಾಧ್ಯ ಸ್ವಾಮೀಜಿ ಉದ್ಘಾಟಿಸಿದರು.
ಈ ವೇಳೆ ಶಾಸಕ ಎನ್.ಎಚ್.ಕೋನರಡ್ಡಿ ಮಾತನಾಡಿ, ‘ಭಾವೈಕ್ಯದ ಬಾಂಧವ್ಯ ಬೆಸೆಯುವ ಕಾರ್ಯಕ್ಕೆ ಎಲ್ಲ ಧರ್ಮಗುರುಗಳೂ ಪ್ರೋತ್ಸಾಹಿಸಬೇಕು. ನವಲಗುಂದ ವಿಧಾನಸಭಾ ಕ್ಷೇತ್ರ ಸರ್ವ ಧರ್ಮಗಳ ಶಾಂತಿಯ ತೋಟವಾಗಿದೆ’ ಎಂದರು.
ವಾಗೀಶ ಪಂಡಿತಾರಾಧ್ಯ ಸ್ವಾಮೀಜಿ ಮಾತನಾಡಿ, ‘ಸೂರ್ಯನ ಬೆಳಕು, ಉಸಿರಾಡುವ ಗಾಳಿ, ಪ್ರಾಣಿ ಪಕ್ಷಿಗಳಿಗೆ ಯಾವುದೇ ಧರ್ಮವಿಲ್ಲ. ಸಮಾಜದಲ್ಲಿ ಸೌಹಾರ್ದಯುತವಾಗಿ ಬದುಕುವುದೇ ನಿಜವಾದ ಧರ್ಮ. ಧರ್ಮದ ಹೆಸರಿನಲ್ಲಿ ರಕ್ತ ಸುರಿಸುವವರು ಧರ್ಮವಂತರಾಗಲು ಸಾಧ್ಯವಿಲ್ಲ’ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮರಡ್ಡಿ ಕಿರೇಸೂರ, ಹನಮರಡ್ಡಿ ತಿಮ್ಮನಾಳ, ಮುರ್ತುಜಾ ದಾಲವಖಾನವರ, ಮಾಬುಸಾಬ ಬಡೇಖಾನವರ, ಪಕ್ಕೀರಡ್ಡಿ ಸಾಸ್ವಿಹಳ್ಳಿ ಇದ್ದರು.