ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರೆ ಸಂತ್ರಸ್ತರ ನಿರ್ಲಕ್ಷ್ಯ: ವಾಟಾಳ್‌ ನಾಗರಾಜ ಆರೋಪ

ಹರಾಜು ಹಾಕಿ ಪ್ರತಿಭಟನೆ
Last Updated 29 ಅಕ್ಟೋಬರ್ 2020, 13:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಉತ್ತರ ಕರ್ನಾಟಕದ ನೆರೆ ಹಾವಳಿಯ ಸಂಕಷ್ಟದ ಪರಿಸ್ಥಿತಿಯನ್ನು ಕೇಂದ್ರದ ಗಮನಕ್ಕೆ ತಂದು ಪರಿಹಾರ ಕೊಡಿಸುವಲ್ಲಿ ರಾಜ್ಯದ ಸಂಸದರು ವಿಫಲರಾಗಿದ್ದಾರೆ ಎಂದು ಆರೋಪಿಸಿದ ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ ರಾಜ್ಯದ ಸಂಸದರ ಭಾವಚಿತ್ರಗಳನ್ನು ಹರಾಜು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ರಾಜ್ಯದ ಎಲ್ಲ ಸಂಸದರ ಫೋಟೊಗಳನ್ನು ಹಿಡಿದು ₹1 ಹಾಗೂ ₹2ಕ್ಕೆ ಹರಾಜು ಕೂಗಿದರು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಭಾವಚಿತ್ರವನ್ನು ₹5ಕ್ಕೆ ಹರಾಜು ಮಾಡಿದರು. ಸಂಸದ ಕರಡಿ ಸಂಗಣ್ಣ ಅವರ ಭಾವಚಿತ್ರವನ್ನು ಬಾಲಕನೊಬ್ಬ ₹1ಕ್ಕೆ ಖರೀದಿಸಿದ. ನವೆಂಬರ್‌ 15ರಂದು ಬೆಳಗಾವಿಯಲ್ಲಿ ಸಂಸದರನ್ನು ಮತ್ತೊಮ್ಮೆ ಹರಾಜು ಮಾಡಲಾಗುವುದು ಎಂದು ನಾಗರಾಜ ತಿಳಿಸಿದರು.

‘ನೆರೆ ಹಾವಳಿಯ ಕಷ್ಟಕ್ಕೆ ₹50 ಸಾವಿರ ಕೋಟಿ ಪರಿಹಾರದ ಪ್ಯಾಕೇಜ್‌ ಕೊಡಿಸಲು ಸಂಸದರಿಗೆ ಸಾಧ್ಯವಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರನ್ನು ನೆರೆಹಾವಳಿ ಪ್ರದೇಶಕ್ಕೆ ಕರೆಸಲು ವಿಫಲರಾಗಿದ್ದಾರೆ, ಇಲ್ಲಿನ ಪರಿಸ್ಥಿತಿ ಬಗ್ಗೆ ಲೋಕಸಭೆಯಲ್ಲಿ ಚರ್ಚೆಯೂ ಮಾಡಲಿಲ್ಲ’ ಎಂದು ಟೀಕಿಸಿದರು.

‘ರಾಜ್ಯದ ಜನರ ಸಂಕಷ್ಟಕ್ಕೆ ಸ್ಪಂದಿಸಲು ನಮ್ಮ ಸಂಸದರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಬೇರೆ ರಾಜ್ಯಗಳ ಸಂಸದರು ತಮ್ಮ ರಾಜ್ಯದ ಸಮಸ್ಯೆಗಳನ್ನು ಲೋಕಸಭೆಯಲ್ಲಿ ಚರ್ಚಿಸಿ ಪರಿಹಾರ ಕಂಡುಕೊಂಡಿದ್ದಾರೆ. ನಮ್ಮವರಿಗೆ ನಮ್ಮವರ ಬಗ್ಗೆ ಕಾಳಜಿಯೇ ಇಲ್ಲ’ ಎಂದರು. ಕನ್ನಡಪರ ಹೋರಾಟಗಾರ ಅಮೃತ ಇಜಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT