ಹುಬ್ಬಳ್ಳಿ: ‘ಉಪ ಚುನಾವಣೆಯ ಟಿಕೆಟ್ ಆಕಾಂಕ್ಷಿಗಳಾಗಿರುವ ಬಿಜೆಪಿಯ ಕೆಲವರು, ಕಾಂಗ್ರೆಸ್ ಟಿಕೆಟ್ಗಾಗಿ ಆ ಪಕ್ಷದ ಮುಖಂಡರನ್ನು ಭೇಟಿಯಾಗುವ ಮೂಲಕ ಅವಸರದ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಇದರಿಂದ ಮುಂದೆ ಅವರಿಗೆ ಒಳ್ಳೆಯದಾಗುವುದಿ’ ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದರು.
ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ‘ಪಕ್ಷದ ನಿರ್ಧಾರಕ್ಕೆ ಬದ್ಧರಾಗಿರುವವರಿಗೆ ಒಳ್ಳೆಯ ಅವಕಾಶ ಇದ್ದೇ ಇದೆ. ಶಾಸಕ ಸ್ಥಾನದಿಂದ ಅನರ್ಹರಾಗಿರುವವರ ಕುರಿತು ಸುಪ್ರೀಂಕೋರ್ಟ್ ತೀರ್ಪು ನೀಡುವವರೆಗೆ ಎಲ್ಲರೂ ಕಾಯಬೇಕು. ಈ ತೀರ್ಪು ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆ ತರಲಿದೆ’ ಎಂದರು.
ಕೇಂದ್ರ ಸಚಿವ ಪ್ರಲ್ಹಾದಜೋಶಿ ಪ್ರತಿಕ್ರಿಯಿಸಿ, ‘ಮುಂದೇನಾಗುತ್ತದೆ ಎಂಬ ಅರಿವಿಲ್ಲದೆ, ಯಾರೂ ಕಾಂಗ್ರೆಸ್ನ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರನ್ನು ಉಪ ಚುನಾವಣೆ ಟಿಕೆಟ್ಗಾಗಿ ಭೇಟಿ ಮಾಡಿ ದುಡುಕಬಾರದು. ಪಕ್ಷವು ಎಲ್ಲರಿಗೂ ನ್ಯಾಯಯುತ ಸ್ಥಾನ ನೀಡುತ್ತದೆ’ ಎಂದು ಹೇಳಿದರು.