ಹುಬ್ಬಳ್ಳಿ: ಏರ್ ಕಂಪ್ರೇಸ್ಸರ್ ಖರೀದಿಸುವುದಾಗಿ ಗ್ರಾಹಕನ ಸೋಗಿನಲ್ಲಿ ನಂಬಿಸಿದ್ದ ವ್ಯಕ್ತಿಯೊಬ್ಬ ಆನ್ಲೈನ್ನಲ್ಲಿ ₹1.4 ಲಕ್ಷ ವಂಚನೆ ಮಾಡಿದ್ದಾನೆ.
ಕೇಶ್ವಾಪುರದ ದೇವಾಂಶ ಬೋರಾ ಅವರಿಗೆ ಕರೆ ಮಾಡಿದ ವಂಚಕ, ನಿಮ್ಮ ತಂದೆಯ ಅಂಗಡಿಯಿಂದ ಸಾಮಗ್ರಿಗಳನ್ನು ಖರೀದಿಸುವುದಾಗಿ ಹೇಳಿ, ಹಣ ಪಾವತಿಸಲು ಅವರ ವಾಟ್ಸ್ಆ್ಯಪ್ ನಂಬರ್ಗೆ ಕ್ಯೂಆರ್ ಕೋಡ್ ಕಳಹಿಸಿ ಸ್ಕ್ಯಾನ್ ಮಾಡಲು ಹೇಳಿದ್ದಾನೆ. ಅದನ್ನು ನಂಬಿದ ದೇವಾಂಶ ಎರಡು ಬಾರಿ ಸ್ಕ್ಯಾನ್ ಮಾಡಿ ಪಾಸ್ವರ್ಡ್ ಹಾಕಿ ಹಣ ಕಬಳಿಸಿದ್ದಾನೆ.
ಕ್ಯೂಆರ್ ಕೋಡ್ ಕಳುಹಿಸಿ ವಂಚನೆ: ಮಾಸ್ಕ್, ಸ್ಯಾನಿಟೈಸರ್ಗೆ ಖರೀದಿಸುವುದಾಗಿ ಔಷಧ ಅಂಗಡಿಯ ಮಾಲೀಕನಿಗೆ ನಂಬಿಸಿದ ವ್ಯಕ್ತಿಯೊಬ್ಬ ಆನ್ಲೈನ್ ಮೂಲಕ ₹45 ಸಾವಿರ ವಂಚಿಸಿದ್ದಾನೆ.
ಧಾರವಾಡದ ಸುಭಾಸ ರಸ್ತೆಯಲ್ಲಿರುವ ರಾಜಸ್ಥಾನ ಮೆಡಿಕಲ್ನ ಅಮನ್ ಶಾ ಅವರಿಗೆ, ಆರ್ಮಿ ಅಧಿಕಾರಿಯೆಂದು ಕರೆ ಮಾಡಿದ ಈ ವಂಚನೆ ಮಾಡಿದ್ದು, ಇದಕ್ಕೆ ತಗುಲುವ ವೆಚ್ಚ ಕಳುಹಿಸುವುದಾಗಿ ಹೇಳಿ ವಾಟ್ಸ್ ಆ್ಯಪ್ಗೆ ಕ್ಯೂ ಆರ್ ಕೋಡ್ ಕಳುಹಿಸಿ ಸ್ಕ್ಯಾನ್ ಮಾಡಲು ತಿಳಿಸಿದ್ದಾನೆ. ಸ್ಕ್ಯಾನ್ ಮಾಡಿ ಪಾಸ್ವರ್ಡ್ ಹಾಕುತ್ತಿದ್ದಂತೆಯೇ ಅವರ ಎಚ್ಡಿಎಫ್ಸಿ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆಯಾಗಿದೆ. ಹುಬ್ಬಳ್ಳಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉದ್ಯೋಗ ಹೆಸರಲ್ಲಿ ವಂಚನೆ: ಉದ್ಯೋಗಕ್ಕಾಗಿ noukariindiawork.info ಜಾಲತಾಣದಲ್ಲಿ ಮಾಹಿತಿ ತುಂಬಿದ ಮಂಜುನಾಥ ನಗರದ ವಿನಾಯಕ ಕಿತ್ತೂರು ₹19,900 ಹಣ ಕಳೆದುಕೊಂಡಿದ್ದಾರೆ.
ಉದ್ಯೋಗ ನೀಡುವುದಾಗಿ ವಿನಾಯಕ ಅವರಿಗೆ ಕರೆ ಮಾಡಿದ ವ್ಯಕ್ತಿ ಜಾಲತಾಣದಲ್ಲಿ ಕೇಳಿರುವ ಮಾಹಿತಿ ತುಂಬುವಂತೆ ಹೇಳಿದ್ದಾನೆ. ಹೆಸರು ಮತ್ತು ವಿಳಾಸದ ಜೊತೆಗೆ ಡೆಬಿಟ್ ಕಾರ್ಡ್ ನಂಬರ್, ಸಿವಿವಿ ನಂಬರ್ ತುಂಬಿ ನೋಂದಣಿ ಮಾಡಿಕೊಂಡಿದ್ದರು. ನಂತರ ಅವರ ಆ್ಯಕ್ಸಿಸ್ ಬ್ಯಾಂಕ್ ಖಾತೆಯಿಂದ ತನ್ನ ಖಾತೆಗೆ ಹಣ ವರ್ಗಾಯಿಸಿಕೊಂಡಿದ್ದಾನೆ. ಹುಬ್ಬಳ್ಳಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆನ್ಲೈನ್ನಲ್ಲಿ ವಂಚನೆ: ಆರ್.ಬಿ.ಎಲ್ ಬ್ಯಾಂಕ್ ಅಧಿಕಾರಿಯೆಂದು ನಂಬಿಸಿದ ವ್ಯಕ್ತಿಯೊಬ್ಬ ಗೋಕುಲ ರಸ್ತೆಯ ಶಂಕರ ಮುದೇನಗುಡಿ ಅವರ ಬ್ಯಾಂಕ್ ಖಾತೆಯಿಂದ ₹45 ಸಾವಿರ ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.