ಹುಬ್ಬಳ್ಳಿ: ಹುಬ್ಬಳ್ಳಿ ಸ್ಪೋರ್ಟ್ಸ್ ಶೂಟಿಂಗ್ ಅಕಾಡೆಮಿ ವತಿಯಿಂದ ಮೇ 22ರಿಂದ 26ರವರೆಗೆ 3ನೇ ಮುಕ್ತ ಶೂಟಿಂಗ್ ಚಾಂಪಿಯನ್ಷಿಪ್ ಏರ್ಪಡಿಸಲಾಗಿದೆ.
ನಗರದ ತತ್ವದರ್ಶ ಆಸ್ಪತ್ರೆ ಬಳಿಯ ಕಲ್ಲೂರ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿರುವ ಅಕಾಡೆಮಿಯಲ್ಲಿ ಸ್ಪರ್ಧೆ ನಡೆಯಲಿದೆ. ರಾಜ್ಯ ಸೇರಿದಂತೆ ವಿವಿಧ ರಾಜ್ಯಗಳ 400ಕ್ಕೂ ಹೆಚ್ಚು ಶೂಟರ್ಗಳು ಭಾಗವಹಿಸಲಿದ್ದಾರೆ.
ಸ್ವರ್ಣ ಗ್ರೂಪ್ನ ವ್ಯವಸ್ಥಾಪಕ ನಿರ್ದೇಶಕ ವಿ.ಎಸ್.ವಿ.ಪ್ರಸಾದ್ ಅವರು ಸ್ಪರ್ಧೆಯನ್ನು ಉದ್ಘಾಟಿಸಲಿದ್ದಾರೆ. ಅಂತರರಾಷ್ಟ್ರೀಯಮಟ್ಟದ ಕ್ರೀಡಾಪಟು ವಿಲಾಸ ನೀಲಗುಂದ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ಓಪನ್ ಸೈಟ್, ಏರ್ ರೈಫಲ್ ಹಾಗೂ ಪಿಸ್ತೂಲ್ ಶೂಟಿಂಗ್ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ. ಒಟ್ಟು ಬಹುಮಾನದ ಮೊತ್ತ ₹1.60 ಲಕ್ಷ ಎಂದು ಅಕಾಡೆಮಿಯ ಅಧ್ಯಕ್ಷ ಶಿವಾನಂದ ಬಾಲೇಹೊಸೂರು ಹಾಗೂ ತರಬೇತುದಾರ ರವಿಚಂದ್ರ ಬಾಲೇಹೊಸೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.