ಹುಬ್ಬಳ್ಳಿ: ಗ್ರಾಮೀಣ ಪ್ರದೇಶಗಳಲ್ಲಿ ಸುಧಾರಿತ ತಂತ್ರಜ್ಞಾನದ ಆಸ್ತಿ ಪ್ರಮಾಣ ಪತ್ರ ವಿತರಣೆ ಮಾಡುವ ಕೇಂದ್ರ ಸರ್ಕಾರದ ಸ್ವಾಮಿತ್ವ ಯೋಜನೆ ಧಾರವಾಡ ಜಿಲ್ಲೆಯಲ್ಲಿಯೂ ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ. ಜಿಲ್ಲೆಯ 67 ಗ್ರಾಮ ಪಂಚಾಯ್ತಿಗಳ 160 ಗ್ರಾಮಗಳನ್ನು ಗುರುತಿಸಿ 94,419 ಆಸ್ತಿಗಳನ್ನು ಡ್ರೋಣ್ ಮೂಲಕ ಸರ್ವೆ ಮಾಡುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
‘ಈ ಯೋಜನೆಯು ಗ್ರಾಮೀಣ ಪ್ರದೇಶದ ಆಸ್ತಿಗಳನ್ನು ತಂತ್ರಜ್ಞಾನದಿಂದ ಭೂಮಾಪನ ಮಾಡಿಸಿ ಮಾಲೀಕರಿಗೆ ಆಸ್ತಿ ಪ್ರಮಾಣ ಪತ್ರ ವಿತರಿಸಲಾಗುತ್ತದೆ. ಇದರಿಂದ ಗ್ರಾಮೀಣ ಜನರ ಆಸ್ತಿಗಳು ಸಂಪೂರ್ಣ ಡಿಜಿಟಲೀಕರಣಗೊಳ್ಳಲಿವೆ. ಕಂದಾಯ ಇಲಾಖೆಯು ಹಳ್ಳಿಗಳಲ್ಲಿ ದಾಖಲೆ ಸಂಗ್ರಹಿಸಲು ಆರಂಭಿಸಿದೆ. ಇದರ ಜತೆಗೆ ವ್ಯಾಜ್ಯದಲ್ಲಿ ಇರುವ ಆಸ್ತಿಯ ಸಮಸ್ಯೆಗಳನ್ನು ಕಡಿಮೆ ಅವಧಿಯಲ್ಲಿ ಬಗೆಹರಿಸಲಾಗುತ್ತದೆ’ ಎಂದು ಹೇಳಿದ್ದಾರೆ.
‘ನಿಖರವಾದ ಭೂ ದಾಖಲಾತಿ ರಚಿಸುವುದು, ಆಸ್ತಿ-ಸಂಬಂಧಿತ ವಿವಾದಗಳನ್ನು ಕಡಿಮೆ ಮಾಡುವುದು ಯೋಜನೆಯ ಉದ್ದೇಶ. ಆಸ್ತಿಗಳ ಬಗ್ಗೆ ಸರಿಯಾದ ದಾಖಲೆಗಳಿದ್ದರೆ, ಯಾವುದೇ ಬ್ಯಾಂಕ್ ಅವರಿಗೆ ಸಾಲವನ್ನು ನಿರಾಕರಿಸುವಂತಿಲ್ಲ. ಈ ಯೋಜನೆ ಗ್ರಾಮಸ್ಥರಿಗೆ ಸಾಲ ತೆಗೆದುಕೊಳ್ಳುವಲ್ಲಿ ನೆರವಾಗುತ್ತದೆ’ ಎಂದಿದ್ದಾರೆ.