ಹುಬ್ಬಳ್ಳಿ: ‘ಬೆಲೆ ಏರಿಕೆಯಿಂದ ತತ್ತರಿಸಿರುವ ಜನರು ಬಿಜೆಪಿ ನಾಯಕರಿಗೆ ಪೊರಕೆ ತೆಗೆದುಕೊಂಡು ಹೊಡೆಯುವ ಕಾಲ ದೂರವಿಲ್ಲ’ ಎಂದು ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಆಕ್ರೋಶ ವ್ಯಕ್ತಪಡಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಹಿಳೆಯರ ತಾಳ್ಮೆ ಪರೀಕ್ಷಿಸಬೇಡಿ. ಅಡುಗೆ ಅನಿಲ ಸಿಲಿಂಡರ್ ದರ ಗಗನಮುಖಿವಾಗಿದೆ. ಜನರ ತಾಳ್ಮೆಗೂ ಮಿತಿ ಇದೆ’ ಎಂದರು.
‘ದೇಶದಲ್ಲಿ ಕರ್ನಾಟಕ ಭ್ರಷ್ಟಾಚಾರದ ‘ರಾಜಧಾನಿ’ಯಾಗಿದೆ. ವಿಧಾನಸೌಧ ಭ್ರಷ್ಟಾಚಾರ ಸೌಧವಾಗಿ ಬದಲಾಗಿದೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ಪತ್ರಿಕೆಗಳ ಎಲ್ಲ ಪುಟಗಳಲ್ಲೂ ಭ್ರಷ್ಟಾಚಾರದ ಬಗ್ಗೆಯೇ ವರದಿ ಇರುತ್ತವೆ’ ಎಂದು ಟೀಕಿಸಿದರು.
‘ಮುಖ್ಯಮಂತ್ರಿ ಮತ್ತು ಸಚಿವ ಸ್ಥಾನಕ್ಕೆ ಕೋಟಿ ಕೋಟಿ ನೀಡಬೇಕು ಎಂದು ಅವರದೇ ಪಕ್ಷದ ಶಾಸಕರು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹಣ ಕೇಳಿದ್ದಾರಾ, ಯಾರು ಹಣ ಕೇಳಿದ್ದಾರೆ ಎನ್ನುವ ಕುರಿತು ತನಿಖೆ ನಡೆಯಬೇಕು’ ಎಂದು ಆಗ್ರಹಿಸಿದರು.
‘ಪಿಎಸ್ಐ ನೇಮಕಾತಿ ಹಗರಣ ಬೆಳಕಿಗೆ ತಂದಿದ್ದೇ ಕಾಂಗ್ರೆಸ್ ಪಕ್ಷ. ಆದರೆ, ಹಗರಣದ ಮಾಹಿತಿ ನೀಡಿದ ಕಾಂಗ್ರೆಸ್ನ ಪ್ರಿಯಾಂಕ ಖರ್ಗೆ ಅವರಿಗೇ ಈ ಯೂಸ್ಲೆಸ್ ಸರ್ಕಾರ ಮೂರು ಬಾರಿ ನೋಟಿಸ್ ನೀಡಿದೆ. ಅಲ್ಲದೆ, ಮಾಹಿತಿ ನೀಡಿದ ಮೇಲೆಯೂ ತನಿಖೆ ನಡೆಸುತ್ತಿಲ್ಲ’ ಎಂದು ದೂರಿದರು.