ಹುಬ್ಬಳ್ಳಿ: ‘ಕಂಪನಿಗಳಲ್ಲಿ ಕೆಲಸ ಮಾಡಿದರಷ್ಟೇ ಕೆಲಸ ಎಂದು ಭಾವಿಸಬಾರದು. ಸ್ವ ಉದ್ಯೋಗ ಸೃಷ್ಟಿಯಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಲಹೆ ನೀಡಿದರು.
ಇಲ್ಲಿನ ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ ಸಿದ್ಧ ಆಹಾರ ಉತ್ಪಾದನೆಯ ಗಾಯಿತ್ರಿ ಇಂಡಸ್ಟ್ರಿ ಕಾರ್ಖಾನೆ ಉದ್ಘಾಟನೆ ಮಾಡಿ ಮಾತನಾಡಿದ ಅವರು, ‘ಸ್ವ ಉದ್ಯೋಗ ಸೃಷ್ಟಿ ಮಾಡುವುದಕ್ಕೆ ಬಹಳಷ್ಟು ಜನ ಹಿಂದೇಟು ಹಾಕುತ್ತಾರೆ. ಹಾಗಾಗಿ, ಸರ್ಕಾರ ಸ್ವ ಉದ್ಯೋಗಕ್ಕಾಗಿ ಹಲವು ಯೋಜನೆಗಳನ್ನು ರೂಪಿಸಿದೆ’ ಎಂದರು.
‘ಗಾಯಿತ್ರಿ ಇಂಡಸ್ಟ್ರಿಯಿಂದ ಸಿರಿಧಾನ್ಯದ ಐದು ಮಾದರಿಯ ಸಿದ್ಧ ಆಹಾರಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದ್ದು, ಇದನ್ನು ಸೇವಿಸುವುದರಿಂದ ರಕ್ತದ ಒತ್ತಡ ಹಾಗೂ ಮಧುಮೇಹದಂತಹ ಸಮಸ್ಯೆಗಳು ತಪ್ಪಲಿವೆ. ಆಹಾರ ಪದ್ಧತಿ ಬದಲಾವಣೆಯಿಂದ ಅನಾರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ’ ಎಂದು ಹೇಳಿದರು.
ಅಭಿನವ ರೇವಣ ಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ‘ಭಾರತ ಸಂಪದ್ಭರಿತ ದೇಶವಾಗಿದ್ದು, ಸಾವಯವ ಪದ್ಧತಿಯನ್ನು ಹಲವು ವರ್ಷಗಳಿಂದ ಪಾಲಿಸಿಕೊಂಡು ಬಂದಿದೆ. ಹಿತ ಮತ್ತು ಮಿತವಾದ ಆಹಾರವನ್ನು ಸೇವನೆ ಮಾಡುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ’ ಎಂದರು.
ಗಾಯಿತ್ರಿ ಇಂಡಸ್ಟ್ರಿಯ ಮಾಲೀಕ ಜಯತೀರ್ಥ ಕಟ್ಟಿ ಮಾತನಾಡಿದರು. ಸಂಸ್ಕರಿತ ಆಹಾರಗಳ ಕೇಂದ್ರದ ನಿರ್ದೇಶಕ ಚೇತನ ಹಂಚಾಟೆ, ಪ್ರಸನ್ನ ಕಟ್ಟಿ, ಅನಂತಾಚಾರ್ಯ ಕಟ್ಟಿ ಇದ್ದರು.