ಹುಬ್ಬಳ್ಳಿ: ಜಲಮಂಡಳಿ ಖಾಸಗೀಕರಣ, ಬಡವರ ನೀರಿನ ಕರ ಮನ್ನಾ ಹಾಗೂ ಕರ ಬಾಕಿ ಇರುವ ಸ್ಲಂ ನಿವಾಸಿಗಳಿಗೆ ನೀರಿನ ಸಂಪರ್ಕ ಕಡಿತಗೊಳಿಸುವುದನ್ನು ಖಂಡಿಸಿ ಮಹಾನಗರ ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಅರವಿಂದ ಬೆಲ್ಲದ ಅವರ ನಿವಾಸದ ಎದುರು ಪ್ರತಿಭಟನೆ ನಡೆಸಿದರು.
ತಲೆ ಮೇಲೆ ಖಾಲಿ ಬಿಂದಿಗೆ ಹೊತ್ತು, ಪ್ರತಿಭಟನಾ ರ್ಯಾಲಿ ಮೂಲಕ ಅಕ್ಷಯ ಪಾರ್ಕ್'ನಲ್ಲಿರುವ ಶಾಸಕರ ನಿವಾಸಕ್ಕೆ ತೆರಳಿದ ಕಾರ್ಯಕರ್ತರು, ಜಲಮಂಡಳಿ ಖಾಸಗೀಕರಣ ರದ್ದುಗೊಳಿಸಲು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಹುಧಾ ಮಹಾನಗರ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ದೀಪಾ ಗೌರಿ, 'ಸರ್ಕಾರ ಪ್ರತಿಯೊಂದು ಕ್ಷೇತ್ರವನ್ನು ಖಾಸಗೀಕರಣ ಮಾಡುತ್ತಿದೆ. ಬಂಡವಾಳ ಶಾಹಿಗಳ ಕಪಿಮುಷ್ಠಿಗೆ ಸರ್ಕಾರಿ ಕ್ಷೇತ್ರಗಳನ್ನು ನೀಡಿ, ಬಡವರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದೆ. ಅಗತ್ಯ ಸೌಲಭ್ಯಗಳಲ್ಲಿ ಪ್ರಮುಖವಾದ ನೀರು ಪೂರೈಕೆಯನ್ನು ಸಹ ಖಾಸಗಿಯವರ ಕೈಗೆ ನೀಡಿ, ಬಡವರು ನೀರಿಗೂ ಪರದಾಡುವಂತೆ ಮಾಡುವ ಹುನ್ನಾರ ನಡೆಸಿದೆ' ಎಂದು ಆರೋಪಿಸಿದರು.
ಮಾರ್ಚ್ 1ರಿಂದ ನೀರಿನ ಕರ ಬಾಕಿ ಉಳಿಸಿಕೊಂಡ ಸ್ಲಂ ನಿವಾಸಿಗಳ ನೀರಿನ ಸಂಪರ್ಕ ಕಡಿತಗೊಳಿಸುವುದಾಗಿ ತಿಳಿಸಿದೆ. ಕೋವಿಡ್'ನಿಂದಾಗಿ ಕೆಲಸವಿಲ್ಲದೆ ಸಂಕಷ್ಟ ಎದುರಿಸುತ್ತಿರುವಾಗ, ಏಕಾಏಕಿ ನೀರಿನ ಸಂಪರ್ಕ ಕಡಿತಗೊಳಿಸುವ ನಿರ್ಧಾರ ಸರಿಯಲ್ಲ. ಬಡವರ ನೀರಿನ ಕರ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.