ಹುಬ್ಬಳ್ಳಿ: ಕೋವಿಡ್ ಇರುವ ಕಾರಣ ಮಂಗಳವಾರ ನಗರದಲ್ಲಿ ಕೃಷ್ಣಾ ಜನ್ಮಾಷ್ಟಮಿ ಆಚರಣೆಯ ಸಂಭ್ರಮ ಕಳೆದ ವರ್ಷದಷ್ಟು ಕಂಡುಬರಲಿಲ್ಲ. ಆದರೆ, ಪೋಷಕರು ತಮ್ಮ ಮಕ್ಕಳಿಗೆ ಕೃಷ್ಣ, ರಾಧೆಯಂತೆ ಅಲಂಕಾರ ಮಾಡಿ ಖುಷಿ ಪಟ್ಟರು.
ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜದ ಕೃಷ್ಣ ಕಲ್ಯಾಣ ಮಂಟಪದಲ್ಲಿ ಕೃಷ್ಣನ ಮೂರ್ತಿಗೆ ಅಲಂಕಾರ ಮಾಡಲಾಗಿತ್ತು. ಇಸ್ಕಾನ್ನಲ್ಲಿ ಬುಧವಾರ ಕಾರ್ಯಕ್ರಮ ಜರುಗಲಿದ್ದು, ಸಾರ್ವಜನಿಕರಿಗೆ ಪ್ರವೇಶವಿಲ್ಲ. ಆದರೆ, ಪ್ರತಿ ವರ್ಷದಂತೆ ವಿಜೃಂಭಣೆಯಿಂದ ಪೂಜಾ ಕಾರ್ಯಗಳು ಜರುಗಲಿವೆ. ಎಲ್ಲ ಕಾರ್ಯಕ್ರಮಗಳನ್ನು www.youtube.com/c/ISKCONHUBLIDHARWADVIDEOS ಮೂಲಕ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಇಲ್ಲಿನ ಇಸ್ಕಾನ್ ಅಧ್ಯಕ್ಷ ರಾಜೀವ ಲೋಚನದಾಸ್ ತಿಳಿಸಿದ್ದಾರೆ.
ಇಸ್ಕಾನ್ನಲ್ಲಿ ಬುಧವಾರ ಬೆಳಿಗ್ಗೆ 4.30ಗೆ ಶ್ರೀಕೃಷ್ಣ ಬಲರಾಮರಿಗೆ ಮಂಗಳಾರತಿ, ಶೃಂಗಾರ ಆರತಿ, ವಿಶೇಷ ನೈವೇದ್ಯ, ಕೃಷ್ಣ ಬಾಲರಾಮರಿಗೆ 108 ಬಗೆಯ ಭಕ್ಷ್ಯಗಳ ನೈವೇದ್ಯ, ಮಹಾ ಅಭಿಷೇಕ ನಡೆಯಲಿದೆ.
ಕಾಲೇಜಿನಲ್ಲಿ ಆಚರಣೆ: ಹುಬ್ಬಳ್ಳಿ ಸಮೀಪದ ಬುಡರಸಿಂಗಿಯಲ್ಲಿರುವ ಕರ್ನಾಟಕ ಶಿಕ್ಷಣ ಸೇವಾ ಸಮಿತಿಯ ಕೆ.ಎಸ್.ಎಸ್.ಎಸ್. ಪದವಿಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು.
ಕಾಲೇಜಿನ ಮುಖ್ಯ ಆಡಳಿತಾಧಿಕಾರಿ ಡಾ. ಜಿ. ಕೆ. ಸತ್ಯಮೂರ್ತಿ ಆಚಾರ್ಯ ಮಾತನಾಡಿ ’ದೇವರ ರೂಪಗಳು ಅನೇಕ ತರಹಗಳಿದ್ದು, ಆದರೆ ಕೃಷ್ಣನ ರೂಪ ಎಲ್ಲರನ್ನೂ ಸೆಳೆಯುತ್ತದೆ’ ಎಂದರು.
ವಿಶ್ವಪ್ರಸನ್ನತೀರ್ಥರ ಆದೇಶದಂತೆ 10ನೇ ತರಗತಿಯಲ್ಲಿ ಶೇ 94ಕ್ಕಿಂತಲೂ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಉಚಿತ ಪ್ರವೇಶ ನೀಡಲಾಗುವುದು ಎಂದರು. ಕಾಲೇಜಿನ ಅಡಳಿತ ಮಂಡಳಿಯ ಕಾರ್ಯದರ್ಶಿ ಗೋಪಾಲ್ ಕುಲಕರ್ಣಿ, ಸಿಬ್ಬಂದಿ ಇದ್ದರು.