ಹುಬ್ಬಳ್ಳಿ: ಹಲವಾರು ವರ್ಷಗಳಿಂದ ಶಿಕ್ಷಕರ ವಿವಿಧ ಬೇಡಿಕೆಗಳು ನನೆಗುದಿಗೆ ಬಿದ್ದಿದ್ದು, ಅವುಗಳನ್ನು ಈಡೇರಿಸಲು ಸರ್ವಧರ್ಮ ಸ್ವಾಮೀಜಿಗಳು ಹಾಗೂ ಶಿಕ್ಷಕ ಸಂಘಟನೆ ಪ್ರಮುಖರ ಜೊತೆ ಚರ್ಚಿಸಲು ದಿನಾಂಕ ಗೊತ್ತುಪಡಿಸಬೇಕು ಎಂದು ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಆರ್. ಭಟ್ ಆಗ್ರಹಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘1995ರ ನಂತರ ಆರಂಭವಾದ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ವಿಸ್ತರಿಸಬೇಕು, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ನೀಡಿದ ಕಾಲ್ಪನಿಕ ವೇತನ ವರದಿ ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದರು. ಈ ಕುರಿತು ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದರು.
‘ಖಾಸಗಿ ಶಾಲಾ ಶಿಕ್ಷಕರಿಗೆ ಜ್ಯೋತಿ ಸಂಜೀವಿನಿ ಯೋಜನೆ ವಿಸ್ತರಿಸಬೇಕು. ಎನ್ಪಿಎಸ್ ಬದಲು ಓಪಿಎಸ್ ಜಾರಿಗೊಳಿಸಬೇಕು. ಖಾಸಗಿ ಶಾಲಾ ಶಿಕ್ಷಕರಿಗೆ ಸೇವಾ ಭದ್ರತೆ ಒದಗಿಸಬೇಕು. ಅನುದಾನ ರಹಿತ ಆಂಗ್ಲಮಾಧ್ಯಮ ಶಾಲಾ ಶಿಕ್ಷಕರಿಗೆ ಕನಿಷ್ಠ ವೇತನ ಜಾರಿಗೊಳಿಸಬೇಕು, ಕೋವಿಡ್ ಸಮಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಹಾಗೂ ಶಿಕ್ಷಕರಿಗೆ ಆದ ನಷ್ಟ ಭರಿಸಬೇಕು’ ಎಂದರು.
‘ದೈಹಿಕ ಶಿಕ್ಷಣ ಶಿಕ್ಷಕರ ಪರಿಷ್ಕರಣೆಗೆ ಡಾ.ಎಲ್.ಆರ್. ವೈದ್ಯನಾಥನ್ ವರದಿ ಜಾರಿಗೊಳಿಸಬೇಕು, ಸರ್ಕಾರಿ ನೌಕರರಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ಖಾಸಗಿ ಶಾಲಾ ಶಿಕ್ಷಕರಿಗೂ ಕೊಡಬೇಕು. ಮುಂಬರುವ ಬಜೆಟ್ನಲ್ಲಿ ಶಿಕ್ಷಕರ ಹಿತ ಕಾಯಲು ಅನುಕೂಲವಾಗುವ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.
ಸಂಘದ ಪ್ರಮುಖರಾದ ಡಾ. ಬಸವರಾಜ ಧಾರವಾಡ, ಶ್ಯಾಮ ಮಲ್ಲನಗೌಡ್ರ, ಎಚ್.ಪಿ. ಬಣಕಾರ, ವಿ.ಎಸ್. ಹುದ್ದಾರ, ಎನ್.ಎನ್. ಸ ವಣೂರ, ಎನ್.ಎನ್. ಕುಂದೂರ, ಎಸ್.ಬಿ. ಶಿವಕುಮಾರ, ಪ್ರಭಾಕರ ಬಂಟ್, ಎಲ್.ಎ. ಹೆಗಡೆ ಸೇರಿದಂತೆ ಹಲವರು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.