ಹುಬ್ಬಳ್ಳಿ: ‘ಅಲ್ಪಸಂಖ್ಯಾತ ಸಮುದಾಯದ ಜನರು ಸರ್ಕಾರದ ಸಾಲ ಸೌಲಭ್ಯಗಳ ಪ್ರಯೋಜನ ಪಡೆದು, ಪ್ರಗತಿ ಸಾಧಿಸಬೇಕು. ಸ್ವಉದ್ಯೋಗದಿಂದ ಆರ್ಥಿಕ ಸ್ವಾವಲಂಬಿಗಳಾಗಬೇಕು. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ, ಅವರ ಭವಿಷ್ಯ ರೂಪಿಸಬೇಕು’ ಎಂದು ಶಾಸಕ ಪ್ರಸಾದ ಅಬ್ಬಯ್ಯ ಸಲಹೆ ನೀಡಿದರು.
ನಗರದ ಗಣೇಶಪೇಟೆಯಲ್ಲಿ ಗುರುವಾರ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ‘ಮೈಕ್ರೊ ಸಾಲ’ ಯೋಜನೆಯಡಿ, ಸ್ವಉದ್ಯೋಗಕ್ಕಾಗಿ ಮಂಜೂರಾದ ತಲಾ ₹10 ಸಾವಿರ ಕಿರುಸಾಲ ಸೌಲಭ್ಯದ ತಿಳಿವಳಿಕೆ ಪತ್ರವನ್ನು 84 ಫಲಾನುಭವಿಗಳಿಗೆ ವಿತರಿಸಿ ಅವರು ಮಾತನಾಡಿದರು.
ಸ್ಥಳೀಯ ಮುಖಂಡ ಇಲಿಯಾಸ್ ಮನಿಯಾರ್ ಮಾತನಾಡಿ, ‘ಶಾಸಕ ಪ್ರಸಾದ ಅಬ್ಬಯ್ಯ ಅವರಿಂದಾಗಿ ಪೂರ್ವ ಕ್ಷೇತ್ರ ಅಭಿವೃದ್ಧಿಗೊಂಡಿದೆ. ಅವರ ಕಾರ್ಯವೈಖರಿ ನಮಗೆಲ್ಲ ಪ್ರೇರಣೆಯಾಗಿದೆ’ ಎಂದರು.