ಹುಬ್ಬಳ್ಳಿ: ‘ಹಿಂದುಳಿದ ವರ್ಗಗಳ ಚಾಂಪಿಯನ್ ಆಗಲು ಹೊರಟಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಆ ಸಮುದಾಯಗಳ ಬಗ್ಗೆ ಮೊಸಳೆ ಕಣ್ಣಿರು ಹಾಕುತ್ತಿದ್ದಾರೆ. ನಿಜವಾಗಿಯೂ ಅವರಿಗೆ ಕಾಳಜಿ ಇದ್ದಿದ್ದರೆ, ತಮ್ಮ ಸರ್ಕಾರದ ಅವಧಿಯಲ್ಲೇ ಜಾತಿ ಜನಗಣತಿ ವರದಿಯನ್ನು ಅಂಗೀಕರಿಸಬೇಕಿತ್ತು’ ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಗೌರವಾಧ್ಯಕ್ಷರೂ ಆಗಿರುವ ‘ಮುಖ್ಯಮಂತ್ರಿ’ ಚಂದ್ರು, ಈ ವರದಿಗೆ ಸಂಬಂಧಿಸಿದಂತೆ 2021ರ ಜುಲೈನಲ್ಲಿ ಹೈಕೋರ್ಟ್ಗೆ ರಿಟ್ ಅರ್ಜಿ ಹಾಕಿದ್ದಾರೆ. 2015ರಲ್ಲಿ ಸಿದ್ಧಗೊಂಡಿರುವ ವರದಿಯನ್ನು ಬಹಿರಂಗಪಡಿಸಲು ಸರ್ಕಾರಕ್ಕೆ ಆದೇಶ ನೀಡುವಂತೆ ಕೋರಿದ್ದಾರೆ’ ಎಂದರು.
‘ಸಿದ್ದರಾಮಯ್ಯ ಅವರು ವರದಿ ಕುರಿತು ಹಸಿ ಸುಳ್ಳು ಹೇಳುತ್ತಿರುವ ಬೆನ್ನಲ್ಲೇ, ಅವರ ಪಕ್ಷದವರು ರಿಟ್ ಹಾಕಿದ್ದಾರೆ. ಅಂದರೆ 2015ರಲ್ಲೇ ವರದಿ ಸಿದ್ಧಗೊಂಡಿದ್ದರೂ ಅಂಗೀಕರಿಸಲು ವಿಳಂಬ ಮಾಡಿದ್ದು ಯಾಕೆ? ಸದಸ್ಯ ಕಾರ್ಯದರ್ಶಿ ಸಹಿ ಹಾಕದಿರುವುದಕ್ಕೆ ಕಾರಣವೇನು? ಎಂಬ ಪ್ರಶ್ನೆಗಳಿಗೆ ಸಿದ್ದರಾಮಯ್ಯ ಉತ್ತರಿಸಬೇಕು’ ಎಂದು ಸವಾಲು ಹಾಕಿದರು.
‘ವರದಿಯನ್ನು ಅಂಗೀಕರಿಸುವ ಮತ್ತು ಅದನ್ನು ಬಹಿರಂಗಪಡಿಸುವ ಕುರಿತು, ಮುಖ್ಯಮಂತ್ರಿ ಮತ್ತು ಸಚಿವ ಸಂಪುಟ ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳಲಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.