ಹುಬ್ಬಳ್ಳಿ: ‘ಎಲ್ಲಾ ಧರ್ಮಗಳ ಸಾರ ಒಳಿತು ಬಯಸುವುದೇ ಆಗಿದೆ. ಕೆಡುಕು ಮಾಡಬೇಕು ಎಂದು ಯಾವ ಧರ್ಮವೂ ಹೇಳುವುದಿಲ್ಲ. ಧರ್ಮದ ಹಾದಿಯಲ್ಲಿ ನಡೆದರೆ ಬದುಕು ಪಾವನವಾಗುತ್ತದೆ’ ಎಂದು ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷ ಲಿಂಗರಾಜ ಅಂಗಡಿ ಹೇಳಿದರು.
ನಗರದ ಹಳೇ ಹುಬ್ಬಳ್ಳಿ ಗುಡಿ ಓಣಿಯಲ್ಲಿ ಭಾನುವಾರ ನಡೆದ ಕರ್ನಾಟಕ ರಾಜ್ಯ ಸ್ವಕುಳಸಾಳಿ ಸಮಾಜದ ‘ಸ್ವಕುಳಸಾಳಿ ವಾರ್ತೆ’ ಮಾಸ ಪತ್ರಿಕೆಯ 11ನೇ ವರ್ಷದ ಪ್ರಥಮ ಸಂಚಿಕೆಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಸಮಾಜದ ಎಲ್ಲಾ ವರ್ಗದವರೊಡನೆ ಪ್ರೀತಿ ಮತ್ತು ಸ್ನೇಹದಿಂದ ಕೂಡಿ ಬಾಳಬೇಕು. ಪರ ಧರ್ಮವನ್ನು ಗೌರವಿಸುತ್ತ, ಸಹಬಾಳ್ವೆಯಿಂದ ಬದುಕಬೇಕು. ಸ್ವಕುಳಸಾಳಿ ಸಮಾಜದವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು ಬಡತನದಲ್ಲಿರುವವರಿಗೆ ನೆರವಾಗುತ್ತಿರುವುದು ಶ್ಲಾಘನೀಯ’ ಎಂದರು.
‘ಪತ್ರಿಕೆಯಿಂದ ಸಿಗುವ ಓದುವ ತೃಪ್ತಿ ಮೊಬೈಲ್ ಮತ್ತು ಅಂತರ್ಜಾಲದ ಸುದ್ದಿಗಳಿಂದ ಸಿಗುವುದಿಲ್ಲ. ಸ್ವಕುಳಸಾಳಿ ಮಾಸ ಪತ್ರಿಕೆಯಲ್ಲೂ ಸಾಕಷ್ಟು ವಿಷಯಗಳಿವೆ. ಜ್ಞಾನಾರ್ಜನೆಗೆ ಹಾಗೂ ಸಾಹಿತ್ಯ ವೃದ್ಧಿಗೆ ಅನುಕೂಲವಾಗುವ ವಿಷಯಗಳು ಮತ್ತಷ್ಟು ಪ್ರಕಟವಾಗಲಿ. ಉದಯೋನ್ಮುಖ ಬರಹಗಾರರಿಗೂ ಪತ್ರಿಕೆಯಲ್ಲಿ ಬರೆಯುವ ಅವಕಾಶ ದೊರೆಯಲಿ’ ಎಂದು ಸಲಹೆ ನೀಡಿದರು.
ಸ್ವಕುಳಸಾಳಿ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಚಂದ್ರಕಾಂತ್ ಭಂಡಾರೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಂತರ ಸ್ವಕುಳಸಾಳಿ ಸಮಾಜದ ಸರ್ವ ಸಾಧಾರಣ ಸಭೆ ನಡೆಯಿತು. ರಾಜ್ಯದ ವಿವಿಧ ಭಾಗಗಳ ಸಮಾಜದ ಮುಖಂಡರು ಮತ್ತು ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಬಿಜೆಪಿ ಕಾರ್ಯಕಾರಿ ಸಮಿತಿ ಸದಸ್ಯೆ ರಾಧಾಬಾಯಿ ಸಫಾರೆ, ಅಖಿಲ ಭಾರತ ಸ್ವಕುಳಸಾಳಿ ಸಮಾಜದ ಅಧ್ಯಕ್ಷ ರಮೇಶ ಚಿಲ್ಲಾಳ, ಶಶಿಕಲಾ ಚೌಧರಿ, ಭಾರತಿ ಜಿಂಧೆ, ವಿಠೋಬಾ ಕರ್ಜಗಿ, ಪರಶುರಾಮ ಚಿಲ್ಲಾಳ, ಮಲ್ಲಿಕಾರ್ಜುನ ಕಾಂಬಳೆ, ನೀಲಕಂಠಪ್ಪ ರೋಖಡೆ ಹಾಗೂ ಶಂಕರರಾವ್ ಸಫಾರೆ ಇದ್ದರು.