ಹುಬ್ಬಳ್ಳಿ: ಸತತ ಎರಡೂವರೆ ದಶಕಗಳ ಕಾಲ ಹೋರಾಟ ಮಾಡಿದ್ದರ ಪರಿಣಾಮ ಮಹಾನಗರ ಪಾಲಿಕೆಯಲ್ಲಿರುವ ಗುತ್ತಿಗೆ ಪದ್ಧತಿಯನ್ನು ರದ್ದು ಪಡಿಸಿ 1,001 ಪೌರ ಕಾರ್ಮಿಕರನ್ನು ನೇರವೇತನ ಪಾವತಿ ಅಂತಿಮ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಇದಕ್ಕೆ ಜಿಲ್ಲಾಧಿಕಾರಿಗಳ ಅನುಮೋದನೆಯೂ ದೊರತಿದೆ ಎಂದು ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪೌರಕಾರ್ಮಿಕರ ಮತ್ತು ನೌಕರರ ಸಂಘದ ಅಧ್ಯಕ್ಷ ವಿಜಯ ಎಂ. ಗುಂಟ್ರಾಳ ತಿಳಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಒಟ್ಟು 1,469 ಜನ ಪೌರ ಕಾರ್ಮಿಕರನ್ನು ನೇರ ವೇತನ ಪಾವತಿ ಪಟ್ಟಿಗೆ ಸೇರ್ಪಡೆ ಮಾಡಲು ಮಹಾನಗರ ಪಾಲಿಕೆ ಆಯುಕ್ತರು ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸಿದ್ದರು. ಇನ್ನುಳಿದ 468 ಪೌರ ಕಾರ್ಮಿಕರಿಗೂ ಕೆಲಸ ಸಿಗುತ್ತದೆ. ವದಂತಿಗೆ ಯಾರೂ ಕಿವಿಗೊಡಬಾರದು. ಎಲ್ಲಾ ಪೌರ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ’ ಎಂದರು.
‘2009ರಿಂದ 2020ರ ವರೆಗೆ ಗುತ್ತಿಗೆ ಪೌರ ಕಾರ್ಮಿಕರಿಗೆ ನೀಡಬೇಕಿರುವ ಬಾಕಿ ವ್ಯತ್ಯಾಸ ಮೊತ್ತ ₹9 ಕೋಟಿ, ಕಾರ್ಮಿಕರ ಭವಿಷ್ಯ ನಿಧಿ ₹3 ಕೋಟಿ, ಎರಡು ವರ್ಷಗಳ ತುಟ್ಟಿ ಭತ್ಯೆ ಬಾಕಿ ಸುಮಾರು ₹2 ಕೋಟಿ ಹಣವನ್ನು ಕೂಡಲೇ ಕೊಡಬೇಕು. ಇಲ್ಲವಾದರೆ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಪೌರ ಕಾರ್ಮಿಕರಾದ ಗಾಳೆಪ್ಪ ದ್ವಾಸಲಕೇರಿ, ಗಂಗಮ್ಮ ಸಿದ್ರಾಂಪುರ, ಯಲ್ಲವ್ವ ದೇವರಗುಡಿಹಾಳ, ದತ್ತಪ್ಪ ಅಪೂಸಪೇಟ್, ಪರಶುರಾಮ ಬೆಳಗುರ್ತಕಿ ಮತ್ತು ರಾಜು ನಾಗರಾಳ ಇದ್ದರು.