ಹುಬ್ಬಳ್ಳಿ: ನಗರದ ಹೊರವಲಯದ ಅಂಚಟಗೇರಿ ಬಳಿ ಕಾರು ಮತ್ತು ಬಸ್ ನಡುವೆ ಸೋಮವಾರ ತಡರಾತ್ರಿ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ, ಕಾರಿನಲ್ಲಿದ್ದ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಕಾರಿನಲ್ಲಿದ್ದ ಒಬ್ಬ, ಬಸ್ಸಿನಲ್ಲಿದ್ದ ಇಬ್ಬರು ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದು, ಕಿಮ್ಸ್ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೈದರಾಬಾದಿನ ಕಾವಡಿಗುಡಾ ಗ್ರಾಮದ ಮುರ್ಗಿಲಾ ಬಾಲರಾಜುಗೌಡ (45), ತೆಲಂಗಾಣದ ಪಿಟ್ಟಂಪಲ್ಲಿಯ ರುದ್ರರಪು ನವೀನ (26) ಮತ್ತು ಆಂಧ್ರಪ್ರದೇಶದ ಮೊದಗಪಲ್ಲೆಯ ಬಾಹುದೊಡ್ಡಿ ಪ್ರದೀಪ (35) ಮೃತರು.
ತೆಲಂಗಾಣದ ಕೋತ್ತಗುಡದ ಸೀತಾರಾಮ ಕಾಗೆದಿಯಾ, ವಿಜಯಪುರದ ಉಕ್ಕಲಿ ಗ್ರಾಮದ ಅರ್ಜುನ ಓಜಿ ಮತ್ತು ಹಾವೇರಿ ಜಿಲ್ಲೆಯ ಅಗಡಿಯ ರಾಜು ಬಾರ್ಕಿ ಗಾಯಗೊಂಡವರು.
ಹುಬ್ಬಳ್ಳಿಯಿಂದ ಕಾರವಾರಕ್ಕೆ ತೆರಳುತ್ತಿದ್ದ ಬಸ್ ಹಾಗೂ ಕಾರವಾರ ರಸ್ತೆಯಿಂದ ಹುಬ್ಬಳ್ಳಿಗೆ ಬರುತ್ತಿದ್ದ ಫಾರ್ಚುನರ್ ಕಾರು ನಡುವೆ ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ಜಖಂಗೊಂಡಿದೆ. ಬಸ್ಸಿನ ಮುಂಭಾಗ ಸಹ ನಜ್ಜುಗುಜ್ಜಾಗಿದೆ.
ಹುಬ್ಬಳ್ಳಿ ಗ್ರಾಮೀಣ ಠಾಣೆ ಪೋಲಿಸರು ಭೇಟಿ ನೀಡಿದ್ದು, ಮೃತ ದೇಹಗಳನ್ನು ಕಿಮ್ಸ್ ಶವಾಗಾರಕ್ಕೆ ಸಾಗಿಸಿದ್ದಾರೆ. ಕಾರಿನಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿದ್ದು, ಅಪಘಾತಕ್ಕೆ ಮದ್ಯ ಸೇವನೆಯೇ ಕಾರಣ ಎನ್ನುವ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಪ್ರಕರಣ ದಾಖಲಾಗಿದೆ.