ಟ್ರ್ಯಾಕ್ಟರ್ಗೆ ಟ್ಯಾಂಕರ್ ಡಿಕ್ಕಿ: ಇಬ್ಬರು ಸಾವು

ಹುಬ್ಬಳ್ಳಿ: ನಗರದ ಹೊರವಲಯದ ಬೆಂಗಳೂರು– ಪುಣೆ ರಾಷ್ಟ್ರೀಯ ಹೆದ್ದಾರಿಯ ಬುಡರಸಿಂಗಿ ಕ್ರಾಸ್ ರಸ್ತೆ ಬದಿ ನಿಂತಿದ್ದ ಟ್ರ್ಯಾಕ್ಟರ್ಗೆ ಟ್ಯಾಂಕರ್ ಲಾರಿ ಡಿಕ್ಕಿ ಹೊಡೆದಿದ್ದರಿಂದ ಇಬ್ಬರು ಮೃತಪಟ್ಟಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ತಾಲ್ಲೂಕಿನ ಹುನಗುಂದ ಗ್ರಾಮದ ಕಲ್ಮೇಶ ಯಂಕಮ್ಮನವರ (26) ಹಾಗೂ ಹಾವೇರಿ ಜಿಲ್ಲೆ ಶಿಗ್ಗಾವಿ ತಾಲ್ಲೂಕಿನ ಅಡವಿಸೋಮಾಪುರದ ಕಲ್ಮೇಶ ಜಾಧವ (26) ಮೃತರು. ಘಟನೆಯಲ್ಲಿ ಮುಂಡಗೋಡದ ಚಿಗಳ್ಳಿಯ ವಿನಾಯಕ ಅರ್ಜುನ ಮಾನಾಬಾಯಿ ಗಾಯಗೊಂಡಿದ್ದಾರೆ. ನ. 2ರಂದು ರಾತ್ರಿ 10.30ರ ಸುಮಾರಿಗೆ ಘಟನೆ ನಡೆದಿದ್ದು, ಆರೋಪಿ ಟ್ಯಾಂಕರ್ ಚಾಲಕ ಮಹಾರಾಷ್ಟ್ರದ ಬಾವುಸಾಹೇಬ ಅಶೋಕ ಡಾಕನೆಯನ್ನು ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೃತರಿಬ್ಬರು ಹಾಗೂ ಗಾಯಾಳು ವಿನಾಯಕ ರಸ್ತೆ ಬದಿ ಟ್ರಾಕ್ಟರ್ ನಿಲ್ಲಿಸಿಕೊಂಡು, ಟ್ರೇಲರ್ಗೆ ಜಾಕ್ ಹಾಕುತ್ತಿದ್ದರು. ಆಗ ಹಾವೇರಿ ಕಡೆಯಿಂದ ವೇಗವಾಗಿ ಬಂದ ಟ್ಯಾಂಕರ್ ಚಾಲಕ ಬಾವುಸಾಹೇಬ, ಹಿಂದಿನಿಂದ ಟ್ರೇಲರ್ಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಇಬ್ಬರೂ ಸ್ಥಳದಲ್ಲೇ ಮೃತಪಟ್ಟರು. ವಿನಾಯಕ ಹಾಗೂ ಟ್ಯಾಂಕರ್ ಚಾಲಕ ವಿನಾಯಕ ಗಾಯಗೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.
ಪಿಠೋಪಕರಣ ಕಾರ್ಖಾನೆಗೆ ಬೆಂಕಿ: ಗೋಕುಲ ರಸ್ತೆಯ ಕೈಗಾರಿಕಾ ಪ್ರದೇಶದಲ್ಲಿರುವ ಫರ್ನೀಚರ್ ಗ್ರೇಸ್ ಎಂಬ ಪಿಠೋಪಕರಣ ತಯಾರಿಕೆ ಕಾರ್ಖಾನೆಯಲ್ಲಿ ಗುರುವಾರ ಬೆಳಿಗ್ಗೆ ಬೆಂಕಿ ಅವಘಡ ಸಂಭವಿಸಿದೆ. ತೇಗ, ಸಾಗವಾನಿ ಸೇರಿದಂತೆ ವಿವಿಧ ಮರಗಳಿಂದ ಮಾಡಿದ ಸೋಪಾ, ಮಂಚ ಸೇರಿದಂತೆ ಹಲವು ಪಿಠೋಪಕರಣಗಳು ಬೆಂಕಿಗೆ ಆಹುತಿಯಾಗಿವೆ.
ಪ್ರಕಾಶ ಇರಕಲ್ ಅವರಿಗೆ ಸೇರಿದ ಕಾರ್ಖಾನೆ ಇದ್ದಾಗಿದ್ದು, ಬೆಳಗ್ಗೆ 7ಕ್ಕೆ ಘಟನೆ ಸಂಭವಿಸಿದೆ. ಕಾರ್ಖಾನೆಯ ಕಾವಲುಗಾರ ತಕ್ಷಣ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ನಾಲ್ಕು ವಾಹನಗಳೊಂದಿಗೆ ಸ್ಥಳಕ್ಕೆ ಬಂದ ಅಮರಗೋಳ ಮತ್ತು ಶಹರ ಅಗ್ನಿಶಾಮಕ ಠಾಣೆಯ ಸಿಬ್ಬಂದಿ, ಆರು ತಾಸು ಕಾರ್ಯಾಚರಣೆ ನಡೆಸಿ ಅಗ್ನಿ ನಂದಿಸಿದರು.
ಘಟನೆಗೆ ಶಾರ್ಟ್ ಸರ್ಕ್ಯೂಟ್ ಕಾರಣ ಎನ್ನಲಾಗಿದ್ದು, ಸುಮಾರು ₹40 ಲಕ್ಷ ಮೌಲ್ಯದ ಪಿಠೋಪಕರಗಳು ಸುಟ್ಟು ಹೋಗಿವೆ ಎಂದು ಅಂದಾಜಿಸಲಾಗಿದೆ. ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಧನ: ತಾಲ್ಲೂಕಿನ ಚನ್ನಾಪುರದ ಚವರಗುಡ್ಡದ ಬಳಿಯ ಜಮೀನಿನ ಶೆಡ್ವೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ₹17,250 ಮೌಲ್ಯದ ಸ್ಪಿರೀಟ್ ಅನ್ನು ಜಪ್ತಿ ಮಾಡಿರುವ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು, ರವಿ ಜಾಧವ ಎಂಬಾತನನ್ನು ಬಂಧಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.