ಹುಬ್ಬಳ್ಳಿ: ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶಗೌಡ ಗೌಡರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ವಶಕ್ಕೆ ಪಡೆದಿರುವ ಸಿಬಿಐ, ಭಾನುವಾರವೂ ತೀವ್ರ ವಿಚಾರಣೆಗೆ ಒಳಪಡಿಸಿತು.
ಹತ್ಯೆಯಾದ ಯೋಗೀಶಗೌಡ ಅವರ ಪತ್ನಿ ಮಲ್ಲಮ್ಮ ಹಾಗೂ ವಿನಯ ಅವರ ಆಪ್ತ, ಕೆಪಿಸಿ ಕಾರ್ಯದರ್ಶಿ ನಾಗರಾಜ ಗೌರಿ, ವಿನಯ ಅವರ ಸೋದರ ಮಾವ ಚಂದ್ರಶೇಖರ ಇಂಡಿ ಅವರನ್ನು ಸಹ ವಿಚಾರಣೆಗೊಳಪಡಿಸಿತು. ತನಿಖಾಧಿಕಾರಿ ರಾಕೇಶ ರಂಜನ್ ನೇತೃತ್ವದ ಐವರು ಅಧಿಕಾರಿಗಳ ತಂಡವು ವಿಚಾರಣೆ ನಡೆಸಿತು.
‘ಯೋಗೀಶಗೌಡ ಅವರ ಹತ್ಯೆಗೆ ವಿನಯ ಅವರೇ ಸಂಚು ರೂಪಿಸಿದ್ದರು’ ಎಂದು ಮಲ್ಲಮ್ಮ ಆರೋಪಿಸಿದ್ದರು. ನಂತರದ ದಿನಗಳಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಅವರ ಈ ನಡೆ ಸಂಶಯಕ್ಕೆ ಕಾರಣವಾಗಿತ್ತು. ಮಲ್ಲಮ್ಮ ಕಾಂಗ್ರೆಸ್ ಸೇರ್ಪಡೆಯಾಗಲು ನಾಗರಾಜ ಗೌರಿ ಪ್ರಮುಖ ಪಾತ್ರ ವಹಿಸಿದ್ದ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ಮಲ್ಲಮ್ಮ ಮತ್ತು ನಾಗರಾಜ ಅವರನ್ನು ವಿಚಾರಣೆಗೆ ಒಳಪಡಿಸಿದರು.
ಜಿಲ್ಲಾ ಪಂಚಾಯ್ತಿ ಚುನಾವಣೆ ವೇಳೆ ಯೋಗೀಶಗೌಡ ಅವರು ನೀತಿಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಜಿಲ್ಲಾ ಪಂಚಾಯ್ತಿ ಎಇಇ ಎಸ್.ಎನ್. ಗೌಡರ ದೂರು ದಾಖಲಿಸಿದ್ದರು. ರಾಜಕೀಯ ಒತ್ತಡದ ಮೇಲೆ ಅವರು ದೂರು ದಾಖಲಿಸಿದ್ದರು ಎಂಬ ಆರೋಪವೂ ಇತ್ತು. ಸಿಬಿಐ ಗೌಡರ ಅವರನ್ನು ವಿಚಾರಣೆ ನಡೆಸಿತು.