ರೋಣ: ಆಶ್ರಯ ಯೋಜನೆ ಮನೆಗಾಗಿ ತಾಲ್ಲೂಕಿನ ಮುದೇನಗುಡಿ ಗ್ರಾಮದ ಬಸಮ್ಮ ಜಾಲಿಕಟ್ಟೆ ಎಂಬ ವೃದ್ಧೆ ಜಿಲ್ಲಾಧಿಕಾರಿ ಎದುರು ಶನಿವಾರ ಕಣ್ಣಿರಿಟ್ಟರು.
ಇಲ್ಲಿನ ತಾಲ್ಲೂಕು ಪಂಚಾಯ್ತಿ ಸಭಾಭವನದಲ್ಲಿ ನಡೆದ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಮನೆ ನೀಡುವಂತೆ ವೃದ್ಧೆ ಅಂಗಲಾಚಿ, ಹಲವು ವರ್ಷಗಳಿಂದ ನಾನು ಗುಡಿಸಲಿನಲ್ಲಿ ವಾಸಿಸುತ್ತಿದ್ದೇನೆ. ನನಗೆ ವಾಸಿಸಲು ಮನೆ ಇಲ್ಲ. ಮನೆ ನೀಡುವಂತೆ ಹಲವು ಬಾರಿ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ತಾವು ದಯೆ ತೋರಬೇಕು ಸಾಹೇಬ್ರೇ’ ಎಂದು ಕಣ್ಣೀರಿಟ್ಟರು.
ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಯಿಸಿ ವೃದ್ಧೆಗೆ ಮನೆ ಮಂಜೂರು ಮಾಡಿಕೊಂಡುವಂತೆ ಸೂಚಿಸಿದರು.
ತಾಲ್ಲೂಕಿನ ಬೆಳವಣಕಿ ಗ್ರಾಮದಲ್ಲಿ ಆಕ್ರಮವಾಗಿ ಮದ್ಯ ಮಾರಾಟವಾಗುತ್ತಿದ್ದು ಈ ಕುರಿತು ಕ್ರಮ ವಹಿಸಬೇಕು ಎಂದು ಬೆಳವಣಕಿ ಗ್ರಾಮದ ನಿವಾಸಿ ಪಿ.ಸಿ.ಕುಸುಗಲ್ಲಮಠ ಆಗ್ರಹಿಸಿದರು. ಜಿಲ್ಲಾಧಿಕಾರಿ ಈ ಸಮಸ್ಯೆ ಪರಿಹರಿಸುವಂತೆ ಅಬಕಾರಿ ಇಲಾಖೆ ಅಧಿಕಾರಿ ಅಕ್ಕಿ ಅವರಿಗೆ ಸೂಚಿಸಿದರು.
ಉತ್ತರ ಕರ್ನಾಟಕ ರೈತ ಸಂಘಟನೆಯ ಪದಾಧಿಕಾರಿಗಳು ಮೂರು ದಿನಗಳಲ್ಲಿ ಹೆಸರು ಕಾಳು ಖರೀದಿ ಕೇಂದ್ರ ಆರಂಭಿಸಬೇಕು ಇಲ್ಲವಾದರೆ ಜಿಲ್ಲಾಧಿಕಾರಿ ಕಚೇರಿ ಎದುರು ಸತ್ಯಾಗ್ರಹ ಕೈಗೊಳ್ಳುವುದಾಗಿ ತಿಳಿಸಿದರು. ಕೂಡಲೇ ಈ ಕುರಿತು ಕ್ರಮ ಕೈಗೊಳ್ಳುವುದಾಗಿ ಡಿ.ಸಿ ಭರವಸೆ ನೀಡಿದರು.
ತಾಲ್ಲೂಕಿನ ಮಲ್ಲಾಪೂರ ಗ್ರಾಮದಲ್ಲಿ ನರೇಗಾ ಯೋಜನೆಯಡಿ ₹ 33 ಲಕ್ಷ ಅವ್ಯವಹಾರ ನಡೆದಿದೆ. ಈ ಕುರಿತು ತನಿಖೆ ನಡೆಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪ ವಿಭಾಗಾಧಿಕಾರಿ ಪಿ.ಎಸ್.ಮಂಜುನಾಥ, ತಹಶೀಲ್ದಾರ್ ಅಜೀತ್ ರೈ, ಜಿಲ್ಲಾ ನಗಾರಾಭಿವೃದ್ಧಿ ಕೋಶದ ಅಧಿಕಾರಿ ಪಿ.ಟಿ.ದಿನೇಶ ಇದ್ದರು.