ಗದಗ: ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ, ದ.ರಾ ಬೇಂದ್ರೆ ಹಾಗೂ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಅವರು ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಜತೆ ಸೆಲ್ಫಿ ತೆಗದುಕೊಳ್ಳುತ್ತಿದ್ದಾರೆ. ಇದನ್ನು ನೋಡಲು ಜನರು ತಂಡೋಪತಂಡವಾಗಿ ಬರುತ್ತಿದ್ದಾರೆ.
ಅರೇ.. ಇದೇನು ಎಂದು ಹುಬ್ಬೇರಿಸಬೇಡಿ, ಇಲ್ಲಿನ ವೀರೇಶ್ವರ ಪುಣ್ಯಾಶ್ರಮದ ಪಂಚಾಕ್ಷರ ಗವಾಯಿ ಅವರ 74ನೇ ಸ್ವರಸಮಾರಾಧನೆ ಮತ್ತು ಪುಟ್ಟರಾಜ ಕವಿ ಗವಾಯಿಗಳ 8ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಉತ್ತರ ಕರ್ನಾಟಕ ವ್ಯಂಗ್ಯ ಚಿತ್ರಕಾರರ ಸಂಘವು ಆಯೋಜಿಸಿರುವ ವ್ಯಂಗ್ಯಚಿತ್ರ ಪ್ರದರ್ಶನದ ನೋಟ. ಉಭಯ ಗವಾಯಿಗಳ ಜಾತ್ರಾ ಮಹೋತ್ಸವ ಅಂಗವಾಗಿ ಸಂಘದ ಆರ್.ಜಿ. ಕುಲಕರ್ಣಿ, ಜಗದೀಶ ಭಜಂತ್ರಿ, ಮಧುಕರ ಎಕ್ಕೇರಿ, ಪ್ರಶಾಂತ ನಾಯಕ ಸೇರಿ 17 ಕಲಾವಿದರ ವ್ಯಂಗ್ಯ ಚಿತ್ರಗಳು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.
ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ನಡೆದ ಹೋರಾಟ, ರಾಜಕೀಯ, ಐಟಿ ದಾಳಿ, ಮತಗಳಿಕೆಗೆ ಮುಖಂಡರ ಜಪ, ರೈತರ ಸಾಲ ಮನ್ನಾ, ಮೂಢನಂಬಿಕೆ ಹೀಗೆ ತರಹೇವಾರಿ ವಿಷಯಗಳಿಗೆ ಸಂಬಂಧಿಸಿದ ವ್ಯಂಗ್ಯ ಚಿತ್ರಗಳು ಗಮನ ಸೆಳೆಯುತ್ತಿವೆ.
ಜೂ.29 ರಿಂದ ಪ್ರದರ್ಶನ ಆರಂಭವಾಗಿದ್ದು, ಜುಲೈ 3ರ ವರೆಗೆ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶ ಇದೆ.