ರೋಣ: ‘ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲ ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಉತ್ತಮ ಆಡಳಿತ ನೀಡಿದೆ’ ಎಂದು ಹಾವೇರಿ–ಗದಗ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಹೇಳಿದರು.
ತಾಲ್ಲೂಕಿನ ಹಿರೇಹಾಳ ಕೊತಬಾಳ ಮತ್ತು ಸವಡಿ ಗ್ರಾಮದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರನ್ನುದ್ದೇಶಿಸಿ ಅವರು ಮಾತನಾಡಿದರು.
‘ರಾಜ್ಯದಲ್ಲಿ ಜಾರಿಗೆ ತಂದ ಐದು ಗ್ಯಾರಂಟಿಗಳು ಬರಗಾಲ ಮತ್ತು ಬೆಲೆ ಏರಿಕೆಯ ಇಂದಿನ ದಿನಮಾನಗಳಲ್ಲಿ ಜನಸಾಮಾನ್ಯರ ಕೈಹಿಡಿವೆ’ ಎಂದು ಅವರು ಅಭಿಪ್ರಾಯಪಟ್ಟರು.
‘ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುವುದೇ ಮೊದಲ ಕಾರ್ಯ’ ಎಂದರು.
ರೋಣ ಶಾಸಕ ಜಿ.ಎಸ್. ಪಾಟೀಲ, ‘ಚುನಾವಣೆ ಮುಗಿದ ನಂತರ ಗ್ಯಾರಂಟಿ ಯೋಜನೆ ನಿಲ್ಲಿಸುತ್ತಾರೆ ಎಂಬ ವಿರೋಧ ಪಕ್ಷದ ನಾಯಕರ ಹೇಳಿಕೆ ಬಾಲಿಶತನದಿಂದ ಕೂಡಿದೆ. ಈಗಾಗಲೇ ಬಜೆಟ್ನಲ್ಲಿ ಹಣ ಮೀಸಲಿರಿಸಲಾಗಿದ್ದು, ಈ ಯೋಜನೆಗಳಿಗೆ ಮುಂದುವರಿಯಲಿವೆ’ ಎಂದರು.
‘ಮೂರು ವರ್ಷ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಕ್ಷೇತ್ರದ ಬಡವರಿಗೆ ಒಂದೂ ಮನೆ ಕೊಟ್ಟಿಲ್ಲ. ಸಿದ್ದರಾಮಯ್ಯ ಅವರು ಮೂರು ಲಕ್ಷ ಮನೆ ನಿರ್ಮಾಣಕ್ಕೆ ಹಣ ಮೀಸಲಿಟ್ಟಿದ್ದು, ರೋಣ ಮತಕ್ಷೇತ್ರದ ಹಿರೇಹಾಳ ಮತ್ತು ಮಾಡಲಗೇರಿ ಪಂಚಾಯ್ತಿ ವ್ಯಾಪ್ತಿಯಲ್ಲಿ ತಲಾ 100 ಮನೆಗಳನ್ನು ಬಡವರಿಗಾಗಿ ನಿರ್ಮಿಸಲಾಗುವುದು’ ಎಂದರು.
ಮಾಜಿ ಸಚಿವ ಆರ್. ಶಂಕರ್, ಕಾಂಗ್ರೆಸ್ ಮುಖಂಡರಾದ ಟಿ.ಈಶ್ವರ್, ಸಿದ್ದಣ್ಣ ಬಂಡಿ, ಪರಶುರಾಮ ಅಳಗವಾಡಿ, ಅಮೃತಗೌಡ ಗೌಡರ, ಶಿವಪ್ಪ ಗಾಣಿಗೇರ, ವಿ.ಆರ್. ಗುಡಿಸಾಗರ, ಎಚ್.ಎಸ್. ಸೋಂಪೂರ ಇದ್ದರು.