ಗದಗ: ‘ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯು ಸೆ.20 ರಿಂದ 24 ರವರೆಗೆ ಕೈಗಾರಿಕಾ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ‘ಗದಗ ಉತ್ಸವ–2018’ ಆಯೋಜಿಸಿದೆ’ ಎಂದು ಉತ್ಸವ ಸಮಿತಿ ಅಧ್ಯಕ್ಷ ಆನಂದ ಎಲ್. ಪೊತ್ನೀಸ್ ಹೇಳಿದರು.
ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ವಸ್ತುಪ್ರದರ್ಶನ ನಡೆಯಲಿದೆ. ಸೆ.20ರಂದು ಸಂಜೆ 5.30 ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎನ್. ಮಹೇಶ್ ಕಾರ್ಯಕ್ರಮ ಉದ್ಘಾಟಿಸಲಿದ್ದು,ಬಾಬಣ್ಣ ಶಾಬಾದಿಮಠ ಅಧ್ಯಕ್ಷತೆ ವಹಿಸಲಿದ್ದಾರೆ’ ಎಂದರು.
‘ಈ ಬಾರಿ 100 ಮಳಿಗೆ ತೆರೆಯಲಾಗಿದೆ. ಇದರಲ್ಲಿ 50 ಮಳಿಗೆಗಳನ್ನು ಸಣ್ಣ ಕೈಗಾರಿಕೆಗಳ ಉತ್ಪನ್ನ ಪ್ರದರ್ಶನಕ್ಕೆ ಮೀಸಲಿಡಲಾಗಿದೆ.ಉಳಿದವುಗಳನ್ನು ದೊಡ್ಡ ಕೈಗಾರಿಕೆಗಳ ಪ್ರದರ್ಶನಕ್ಕೆ ಬಾಡಿಗೆಗೆ ನೀಡಲಾಗುವುದು. ಈ ಉತ್ಸವಕ್ಕೆ ಜಿಲ್ಲಾ ಕೈಗಾರಿಕಾ ಕೇಂದ್ರ ₹5 ಲಕ್ಷ, ಜಿಲ್ಲಾ ಪಂಚಾಯ್ತಿ ₹ 2.5 ಲಕ್ಷ ಹಾಗೂ ನಬಾರ್ಡ್ ₹50 ಸಾವಿರ ಆರ್ಥಿಕ ನೀಡಲಿವೆ’ ಎಂದರು.
‘ರಾಮನಗರ, ಮೈಸೂರು, ಚೆನ್ನಪಟ್ಟಣ, ಚಿಕ್ಕಮಗಳೂರು ಜಿಲ್ಲೆಗಳ ಉದ್ಯಮಿಗಳು ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ. ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಉತ್ಸವ ನಡೆಯುವ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದರು.
ಉದ್ಯಮಿ ವಿಜಯಕುಮಾರ ಫ. ಗಡ್ಡಿ ಅವರಿಗೆ ಶ್ರೇಷ್ಠ ಉದ್ಯಮಿ, ಸಿದ್ದರಾಮಪ್ಪ ಉಮಚಗಿ, ಬಸಪ್ಪ ಶಂಕ್ರಪ್ಪ ಪಲ್ಲೇದ, ಮಂಜುನಾಥ ವೆಂಕಟೇಶ ಆನೆಗುಂದಿ ಅಂದಪ್ಪ ಬಸವಣ್ಣೆಪ್ಪ ಗೋಡಿ, ಸುಲೇಮಾನಸಾಬ ನವಾಸಾಬ ಕಣಕೆ ಅವರಿಗೆ ಶ್ರೇಷ್ಠ ವರ್ತಕ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದರು.
ಶರಣಪ್ಪ ಕುರಡಗಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಟಿ. ದಿನೇಶ, ಎಂ.ಬಿ. ಸುರಕೋಡ, ವೀರಣ್ಣ ಬೇವಿನಮರದ, ಆರ್.ಬಿ. ದಾನಪ್ಪಗೌಡ್ರ, ಜಯದೇವ ಮೆಣಸಗಿ ಇದ್ದರು.