ಸಿ.ಟಿ.ರವಿ ಕನ್ನಡಿಗರ ಕ್ಷಮೆ ಕೇಳಲಿ: ಎಚ್.ಕೆ.ಪಾಟೀಲ ಆಗ್ರಹ

ಗದಗ: ‘ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಬಿಜೆಪಿ ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ಟ್ವೀಟ್ ಅನ್ನು ಮರು ಟ್ವೀಟ್ ಮಾಡಿ ಬೆಂಬಲಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ನಡೆ ಆಶ್ಚರ್ಯ ಮತ್ತು ನೋವು ತರಿಸಿದೆ’ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಎಚ್.ಕೆ.ಪಾಟೀಲ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೇಕೆದಾಟು ವಿಷಯದಲ್ಲಿ ರಾಜ್ಯದ ಮುಖ್ಯಮಂತ್ರಿ ಸರಿಯಾದ ನಿಲುವು ತೆಗೆದುಕೊಂಡಿದ್ದಾರೆ. ಆದರೆ, ಪಕ್ಷದ ಪ್ರಧಾನ ಕಾರ್ಯದರ್ಶಿ ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡಿದ್ದಾರೆ. ಈ ವಿಚಾರದಲ್ಲಿ ಜನರಿಗೆ ದ್ವಂದ್ವ ಮೂಡಿದ್ದು, ಬಿಜೆಪಿ ಪಕ್ಷ ತನ್ನ ನಿಲುವು ಸ್ಪಷ್ಟಪಡಿಸಬೇಕು. ಕೆ.ಅಣ್ಣಾಮಲೈ ಹೇಳಿಕೆ ಬೆಂಬಲಿಸಿ ಮರು ಟ್ವೀಟ್ ಮಾಡಿರುವ ಸಿ.ಟಿ.ರವಿ ತನ್ನ ನಿಲುವು ಬದಲಿಸಿಕೊಂಡು ಕನ್ನಡಿಗರ ಕ್ಷಮೆ ಕೇಳಬೇಕು’ ಎಂದು ಆಗ್ರಹಿಸಿದರು.
‘ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಮೇಜರ್ ಧ್ಯಾನ್ಚಂದ್ ಖೇಲ್ ರತ್ನ ಎಂದು ಮರುನಾಮಕಾರಣ ಮಾಡಿರುವುದು ರಾಜಕೀಯ ದುರುದ್ದೇಶದ ನಡೆಯೇ ಹೊರತು, ಕ್ರೀಡಾ ಪ್ರೀತಿಯಿಂದಲ್ಲ. ರಾಜೀವ್ ಗಾಂಧಿ ಹೆಸರು ತೆಗೆದು ಪ್ರಧಾನಿ ಮೋದಿ ಸಣ್ಣತನದ ರಾಜಕಾರಣ ಮಾಡಿದ್ದಾರೆ. ಇದು ಕ್ರೀಡಾಕ್ಷೇತ್ರಕ್ಕೆ ಮಾಡಿದ ಅವಮಾನ’ ಎಂದು ಕಿಡಿಕಾರಿದರು.
‘ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಬಗ್ಗೆ ವಿಶೇಷ ಗೌರವ, ಅಭಿಮಾನ ಇದೆ. ಅವರ ಹೆಸರಿನಲ್ಲಿ ಮತ್ತೊಂದು ಉನ್ನತ ಪ್ರಶಸ್ತಿ ನೀಡಬಹುದಿತ್ತು. ಆದರೆ, ಪ್ರಧಾನಿ ಮೋದಿ ಅವರು ಈ ವಿಚಾರದಲ್ಲಿ ಕೀಳು ಮಟ್ಟದ ರಾಜಕಾರಣ ಮಾಡಿ, ಭಾರತೀಯರಿಗೆ ಅವಮಾನ ಮಾಡಿದ್ದಾರೆ’ ಎಂದು ಆರೋಪ ಮಾಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.