ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಯಕೆ ಈಡೇರಿಸುವ ನರೇಗಲ್‌ ಕಾಮ-ರತಿ!

ಮೂರು ಶತಮಾನದ ಇತಿಹಾಸವಿರುವ ಕಾಮಣ್ಣ ಉತ್ಸವ
ಚಂದ್ರು ಎಂ. ರಾಥೋಡ್
Published 24 ಮಾರ್ಚ್ 2024, 6:25 IST
Last Updated 24 ಮಾರ್ಚ್ 2024, 6:25 IST
ಅಕ್ಷರ ಗಾತ್ರ

ನರೇಗಲ್: ಪಟ್ಟಣದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಅದ್ದೂರಿಯಾಗಿ ಪ್ರತಿಷ್ಠಾಪಿಸುವ ಪರಮೇಶ್ವರನ ನೀತಿ ಪಾಠದ ಸಭಾಮಂಟಪ ಮೂರು ಶತಮಾನಕ್ಕೂ ಹೆಚ್ಚಿನ ವರ್ಷಗಳ ಇತಿಹಾಸವನ್ನು ಹೊಂದಿದೆ. ಎಲ್ಲಾ ಮೂರ್ತಿಗಳು ಹಾಗೂ ಹಳೇ ಕಾಲದ ಅಲಂಕಾರ ನೋಡುಗರನ್ನು ತನ್ನೆಡೆಗೆ ಆಕರ್ಷಿಸುತ್ತದೆ.

320 ವರ್ಷಗಳ ಹಿಂದೆ ಪ್ರತಿಷ್ಠಾಪಿಸಿಕೊಂಡು ಬಂದಿರುವ ಎಲ್ಲ ಮೂರ್ತಿಗಳು ಮುಕ್ಕಾಗದಂತೆ ಬಣ್ಣಗಳಿಂದ ಅಲಂಕೃತಗೊಳಿಸಿ ಜೋಪಾನವಾಗಿ ಕಾಪಾಡಿಕೊಂಡು ಉತ್ಸವ ಸಮಿತಿಯವರು ಬಂದಿದ್ದಾರೆ. ಇಂದಿಗೂ ಹಿರಿಯರು ಸಂಪ್ರದಾಯದಂತೆ ರತಿ ಮನ್ಮಥರನ್ನು ಪ್ರತಿಷ್ಠಾಪಿಸಿ ಸಂಭ್ರಮದಿಂದ ಹೋಳಿ ಆಚರಿಸಿಕೊಂಡು ಬರುತ್ತಿರುವುದು ವಿಶೇಷವಾಗಿದೆ.

ಮಾರ್ಚ್‌ 21ಕ್ಕೆ ಪ್ರತಿಷ್ಠಾಪನೆ ಮಾಡಲಾಗಿರುವ ಸಭಾ ಮಂಟಪದಲ್ಲಿ ಶಿವನು ತಪಸ್ಸಿಗೆ ಕುಳಿತಿರುವಂತಿದೆ. ಸಭೆಯ ಎಡಕ್ಕೆ ವಿಶ್ವಾಮಿತ್ರ, ಬಲಕ್ಕೆ ನಾರದ ಮುನಿಗಳು ನಿಂತಿದ್ದಾರೆ. ಶಿವನ ಎದುರಿಗೆ ಕುಳಿತಿರುವ ಭಂಗಿಯಲ್ಲಿ ದೊಡ್ಡಾಕಾರದ ಕಾಮ-ರತಿ ಮೂರ್ತಿಗಳಿವೆ. ಅದರ ಬಲಕ್ಕೆ ಮುಂಭಾಗದಲ್ಲಿ ಮನ್ಮಥನು ಬಿಲ್ಲು ಬಾಣವನ್ನು ಹಿಡಿದು ಶಿವನಿಗೆ ಬಿಡುತ್ತಿರುವ ದೃಶ್ಯವಿದೆ. ಮನ್ಮಥನ ಎದುರಿಗೆ ಅವನ ಹೆಂಡತಿ ಸೀರೆಯುಟ್ಟು ನಿಂತಿರುವಂತೆ ಕಾಣುತ್ತದೆ. ಅಲ್ಲಿಯೇ ಪಕ್ಕದಲ್ಲಿ ರಾಜನೊಬ್ಬ ಸಭೆಗೆ ಬಂದಿರುವ ಹಾಗಿದೆ. ಮುಂದೆ ಕೊರವನು ಕೋತಿಯಾಡಿಸುವ ದೃಶ್ಯ ಕಂಡುಬರುತ್ತದೆ.

ಶಿವನು ತಪಸ್ಸಿಗೆ ಕುಳಿತಾಗ ಅದನ್ನು ಭಗ್ನಗೊಳಿಸಲು ಪಾರ್ವತಿಯೂ ಮನ್ಮಥನನ್ನು ಕಳುಹಿಸುತ್ತಾಳೆ. ಆಗ ಹೂವಿನ ಬಾಣದ ಪ್ರಯೋಗ ಮಾಡುವ ಮನ್ಮಥನಿಗೆ ಮೂರನೇ ಕಣ್ಣುಬಿಡುವ ಶಿವ ಕಾಮಧಹನ ಮಾಡುತ್ತಾನೆ. ನಂತರ ಗಂಡನನ್ನು ಕಳೆದುಕೊಂಡ ರತಿ ಶಿವಪಾರ್ವತಿಯರಲ್ಲಿ ಬದುಕಿಸುವಂತೆ ಹರಕೆಯಿಡುತ್ತಾಳೆ.

ಆಗ ನಿನ್ನ ಗಂಡನ ಕಾಮ(ಕೆಟ್ಟ ಗುಣ) ನನ್ನು ಸುಟ್ಟಿರುವೆ ಆದರೆ ಮನ್ಮಥನ ಯಾವತ್ತೂ ಬದುಕಿರುತ್ತಾನೆ ಎಂದು ಶಿವ ಆಶೀರ್ವದಿಸುತ್ತಾನೆ. ಅದೇ ನೀತಿಪಾಠದ ಸಭೆ ನಿರ್ಮಾಣಮಾಡಿ ಮಕ್ಕಳಿಗೆ ತಿಳಿಸುತ್ತೇವೆ. ಅವುಗಳ ಮುಂದೆ ಹಾಸ್ಯಕ್ಕಾಗಿ ಕೋತಿ, ಇತರೆ ಮೂರ್ತಿ, ಬೊಂಬೆಗಳನ್ನು ಈಡಲಾಗಿದೆ ಎಂದು ಕಾಮಣ್ಣ ಉತ್ಸವ ಸಮಿತಿಯ ಕೆ. ಎಂ. ಸಂಗನಾಳ, ಮಹಾದೇವ ಬೇವಿನಕಟ್ಟಿ ಪ್ರಜಾವಾಣಿಗೆ ತಿಳಿಸಿದರು.

ಮಾರ್ಚ್‌ 25ರವರೆಗೆ ಬೆಳಿಗ್ಗೆ-ಸಂಜೆ ವಿಶೇಷ ಪೂಜೆ, ಉಡಿತುಂಬುವ ಕಾರ್ಯಕ್ರಮಗಳು ನಡೆಯುತ್ತವೆ. ಮಾ.26ಕ್ಕೆ ಬೆಳಗ್ಗೆ 7 ಗಂಟೆಯಿಂದ ವಿವಿಧ ವೇಷ (ಸೋಗು) ಹಾಕುವ ಯುವಕರು ಟ್ರಾಕ್ಟರ್‌ ನಲ್ಲಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೋಗುತ್ತಾರೆ.

ಕಂಕಣಭಾಗ್ಯ-ಮಕ್ಕಳ ಕರುಣಿಸುವ ಕಾಮಣ್ಣ: 

‘ಬಯಕೆ ಈಡೇರಿಸುವ ಕಾಮರತಿ ಎಂದು ಪ್ರಸಿದ್ದಿ ಪಡೆದಿರುವ ಇಲ್ಲಿನ ಉತ್ಸವಕ್ಕೆ ವಿವಿಧ ಜಿಲ್ಲೆಗಳಿಂದ ಭಕ್ತರು ಬರುತ್ತಾರೆ. ಅದರಲ್ಲೂ ಮಕ್ಕಳು, ಮದುವೆ ಆಗದವರು ಭಕ್ತಿಯಿಂದ ಬೇಡಿಕೊಂಡವರ ಇಷ್ಟಾರ್ಥ ಈಡೇರಿದ ಉದಾಹರಣೆಗಳು ಇವೆ’ ಎನ್ನುತ್ತಾರೆ ಉತ್ಸವ ಸಮಿತಿಯ ಹಿರಿಯ ಹನಮಂತಪ್ಪ ಬಾರಕೇರ.

‘ಅದಕ್ಕಾಗಿ ಮದುವೆಗಾಗಿ, ಮಕ್ಕಳಿಗಾಗಿ ಮೂರ್ತಿಗಳಿಗೆ ಸೀರೆ ಉಡಿಸುವ, ಅಲಂಕಾರ, ಪೂಜೆ ಮಾಡಿಸುವ ಕಾರ್ಯಗಳಿಗೆ ಜನರು ಮುಂದಾಗುತ್ತಾರೆ. ಕೆಲವರು ಬೆಳ್ಳಿ, ಬಂಗಾರ ಇನ್ನಿತರೆ ಆಭರಣ, ಉಪಕರಣಗಳನ್ನು ಹಾಕಿ ಪೂಜಿಸಿದ ನಂತರ ಪಡೆಯುವ ಸಾಂಪ್ರದಾಯವಿದೆ’ ಎನ್ನುತ್ತಾರೆ ಸಮಿತಿಯ ಸದಸ್ಯ ವಿರುಪಾಕ್ಷಪ್ಪ ಬಾರಕೆರ.

ನಮ್ಮ ಮನೆತನದ ಹಿರಿಯರು ಲೋಕ ಕಲ್ಯಾಣಕ್ಕಾಗಿ ಹಾಗೂ ಮೂಲ ಸಂಸ್ಕೃತಿಯನ್ನು ಬೆಳೆಸುವ ದೃಷ್ಟಿಯಿಂದ ಬೊಂಬೆಗಳನ್ನು ಕೊಡುಗೆಯಾಗಿ ನೀಡಿದರು

-ಕಳಕಪ್ಪ ಶಿವಪ್ಪ ಹುಯಿಲಗೋಳ ನರೇಗಲ್‌

ಪ್ರತಿ 3 ವರ್ಷಕ್ಕೊಮ್ಮೆ ಧಾರ್ಮಿಕ ವಿಧಿವಿಧಾನದಂತೆ ಕಾಮಣ್ಣ ಹಬ್ಬವನ್ನು ನರೇಗಲ್‌ ಜನತೆ ಸಾಂಘಿಕವಾಗಿ ಆಚರಣೆ ಮಾಡುತ್ತಾರೆ

- ಉಮೇಶ ಕೊತಬಾಳ ನರೇಗಲ್‌

ಹುಯಿಲಗೋಳ ಮನೆತನದ ಕೊಡುಗೆ ಇಲ್ಲಿನ ಕಾಮಣ್ಣ ಉತ್ಸವವು ಹೊಯಿಲಗೋಳ ಮನೆತನದ ಕೊಡುಗೆಯಾಗಿದೆ. ಬ್ರಿಟಿಷರ ಕಾಲದಲ್ಲಿ ಆರು ಎಕರೆ ಹೊಲ ಮಾರಿ ಮಹಾರಾಷ್ಟ್ರದಿಂದ ರೈಲಿನಲ್ಲಿ ಕಣಗಿನಹಾಳ ಸ್ಟೇಷನ್‌ ವರೆಗೆ ರೈಲಿನಲ್ಲಿ ಬೊಂಬೆಗಳನ್ನು ತರಗಲಾಗಿದೆ. ಅಲ್ಲಿಂದ ಹೊರಸಿನಲ್ಲಿ ಹೊತ್ತುಕೊಂಡು ನರೇಗಲ್‌ಗೆ ಬರಲಾಗಿದೆ. ಅದಕ್ಕಾಗಿ ಪ್ರತಿವರ್ಷ ಮೊದಲ ಪೂಜೆ ಹುಯಿಲಗೋಳ ಮನೆತನದಿಂದ ನಡೆಯುತ್ತದೆ. ಸದ್ಯ ಇದಕ್ಕೊಂದು ಸಮಿತಿ ರಚನೆ ಮಾಡಿದ್ದು ದೈವದ ಕೊಣೆಯಲ್ಲಿ ಬೊಂಬೆಗಳನ್ನು ಸುರಕ್ಷಿತವಾಗಿ ಇಡಲಾಗುತ್ತದೆ. ಅಗತ್ಯವಿದ್ದಾಗ ಬಣ್ಣ ಹಚ್ಚಿಸಲಾಗುತ್ತದೆ ಎಂದು ಬಸಪ್ಪ ಗೋಡಿ ಗವಿಸಂಗಪ್ಪ ದಿಂಡೂರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT