ಮುಂಗಾರು, ಹಿಂಗಾರಿನಲ್ಲಿ ಬಿತ್ತನೆ ಆಗಿದ್ದರೆ, ಬೇಸಿಗೆಯಲ್ಲಿ ಒಣ ಮೇವು ಜಾನುವಾರುಗಳಿಗೆ ಲಭಿಸುತ್ತಿತ್ತು. ಆದರೆ, ಈಗ ಮೇವಿಗೆ ತೀವ್ರ ಕೊರತೆ ಇದ್ದು, ದನಕರುಗಳನ್ನು ಹೇಗಪ್ಪಾ ಸಾಕೋದು ಎಂಬ ಚಿಂತೆ ರೈತರನ್ನು ಕಂಗಾಲಾಗಿಸಿದೆ. ರೈತರು ಮನಸ್ಸು ಗಟ್ಟಿ ಮಾಡಿಕೊಂಡು ಪ್ರೀತಿಯಿಂದ ಸಾಕಿದ ತಮ್ಮ ಒಡನಾಡಿಗಳಾದ ಎತ್ತು, ಎಮ್ಮೆ, ಆಕಳುಗಳನ್ನು ಮಾರುತ್ತಿದ್ದಾರೆ. ಪ್ರತಿ ಶುಕ್ರವಾರ ಪಟ್ಟಣದಲ್ಲಿ ದನಗಳ ಸಂತೆ ನಡೆಯುತ್ತಿದ್ದು, ವಾರದಿಂದ ವಾರಕ್ಕೆ ಮಾರಾಟಕ್ಕೆ ತರುತ್ತಿರುವ ಜಾನುವಾರುಗಳ ಸಂಖ್ಯೆ ಏರುತ್ತಿದೆ.