ಗದಗ: ‘ಸಾಕಷ್ಟು ಪದವೀಧರರು ಈಗಲೂ ನಿರುದ್ಯೋಗಿಗಳಾಗಿದ್ದಾರೆ. ಈ ನಿಟ್ಟಿನಲ್ಲಿ ಅವರು ಉದ್ಯೋಗಿಗಳಾಗುವವರೆಗೆ ಭತ್ಯೆ ಒದಗಿಸಿಕೊಡಬೇಕು ಎಂಬುದು ಪ್ರಥಮ ಆದ್ಯತೆಯಾಗಿದೆ’ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಸ್ಪರ್ಧಿಸಿರುವ ಶಿವರಾಜ್ ಕಾಂಬಳೆ ಹೇಳಿದರು.
‘ಜನಪರ ಕಾರ್ಯ ಮಾಡಬೇಕು ಎನ್ನುವ ಉದ್ದೇಶದಿಂದ ಕೆ.ಆರ್.ಎಸ್. ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದು,ನಿರುದ್ಯೋಗಿ ಪದವೀಧರರಿಗೆ ಉದ್ಯೋಗ ಸಿಗುವವರೆಗೆ ನಿರುದ್ಯೋಗ ಭತ್ಯೆ ನೀಡುವಂತೆ ಒತ್ತಾಯಿಸುತ್ತೇನೆ’ ಎಂದು ಅವರು ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಪದವೀಧರರ ಸಮಸ್ಯೆಗಳನ್ನು ಹತ್ತಿರದಿಂದ ನೋಡಿದ್ದೇನೆ. ನಾನು ಕೂಡ ನಿರುದ್ಯೋಗಿ ಪದವೀಧರನಾಗಿದ್ದು, ಸರ್ಕಾರದಿಂದ ಸಿಗಬೇಕಿರುವ ಸವಲತ್ತು ಒದಗಿಸಿಕೊಡಲು ಶ್ರಮಿಸುತ್ತೇನೆ’ ಎಂದು ಹೇಳಿದರು.
‘ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕನ್ನಡಿಗರಿಗೆ ಶೇ 80ರಷ್ಟು ಉದ್ಯೋಗ ನೀಡಬೇಕು ಎಂಬ ನಿಯಮ ಜಾರಿಗೆ ತರಲು ಹಾಗೂ ಸ್ವಯಂ ಉದ್ಯೋಗ ಮತ್ತು ಕರಕುಶಲ ಉದ್ಯೋಗಕ್ಕೆ ಬೇಕಾದ ಪೂರಕ ಸಾಲ ಮತ್ತು ತರಬೇತಿ ನೀಡಿ ನಿರುದ್ಯೋಗ ಹೋಗಲಾಡಿಸಲು ಯತ್ನಿಸುತ್ತೇನೆ’ ಎಂದು ತಿಳಿಸಿದರು.
‘20 ವರ್ಷಗಳ ಕಾಲ ವಾಟರ್ಮನ್ ಮತ್ತು ಸೆಕ್ಯುರಿಟಿ ಕೆಲಸ ಮಾಡಿ ಕೆಳಹಂತದಿಂದ ಮೇಲಕ್ಕೆ ಬಂದಿದ್ದೇನೆ. ನಿರುದ್ಯೋಗ ಸಮಸ್ಯೆಯನ್ನು ಹತ್ತಿರದಿಂದ ಗಮನಿಸಿದ್ದೇನೆ. ಎರಡು ವರ್ಷಗಳಿಂದ ಪದವೀಧರರ ಜತೆಗೆ ನಿರಂತರ ಸಂಪರ್ಕದಲ್ಲಿದ್ದೇನೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಜಯಗಳಿಸಿದರೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ’ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಇಂದಿರಾ ಬಂಕಾಪುರ, ರವಿ ಒಡೆಯರ ಇದ್ದರು.