ಶಿರಹಟ್ಟಿ: ಬಾನಾಡಿಗಳ ತೂಗು ತೊಟ್ಟಿಲಿನ ಆಶ್ರಯ ತಾಣವಾದ ತಾಲ್ಲೂಕಿನ ಮಾಗಡಿ ಕೆರೆಯನ್ನು ರಾಮ್ಸರ್ (ಅಂತರರಾಷ್ಟ್ರೀಯ ಜೌಗು ಪ್ರದೇಶ) ಪಟ್ಟಿಗೆ ಸೇರಿಸಿದ್ದು, ಜಿಲ್ಲೆಯ ಜೀವ ವೈವಿಧ್ಯತೆಗೆ ಹಿಡಿದ ಕೈಗನ್ನಡಿಯಾಗಿದೆ.
ರಾಮ್ಸರ್ ಪಟ್ಟಿಗೆ ಐದು ಭಾರತೀಯ ತೇವ ಪ್ರದೇಶಗಳನ್ನು ಸೇರಿಸಲಾಗಿದ್ದು, ಅದರಲ್ಲಿ ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಮಾಗಡಿ ಕೆರೆ ಸಂರಕ್ಷಣಾ ಮೀಸಲು ಪ್ರದೇಶ ಆಯ್ಕೆಯಾಗಿದ್ದು, ಜಿಲ್ಲೆಗೆ ಮತ್ತೊಂದು ಹೆಮ್ಮೆಯ ಗರಿಯಾಗಿದೆ.
ಮಾಗಡಿ ಕೆರೆಯು 134.15 ಎಕರೆಯಷ್ಟು ವಿಶಾಲವಾದ ವಿಸ್ತೀರ್ಣ ಹೊಂದಿದ್ದು, ಮಾಗಡಿ ಹಾಗೂ ಹೊಳಲಾಪೂರ ಗ್ರಾಮದಲ್ಲಿ ಚಾಚಿಕೊಂಡಿದೆ. ಈ ಕೆರೆಯ ಜಲಾನಯನ ಪ್ರದೇಶ ಪಕ್ಷಿಗಳ ಬಿಡಾರಕ್ಕೆ ಹೇಳಿ ಮಾಡಿಸಿದಂತಿದೆ. ಹಲವಾರು ಪ್ರಬೇಧಗಳ ಹಕ್ಕಿಗಳ ಆಶ್ರಯ ತಾಣದಿಂದ ಜಿಲ್ಲೆಯ ಆಕರ್ಷಕ ಪ್ರವಾಸಿ ತಾಣವಾಗಿ ಮಾಗಡಿ ಕೆರೆ ರೂಪುಗೊಂಡಿದೆ.
ಜಮ್ಮು-ಕಾಶ್ಮೀರ, ಲಡಾಖ್, ಟಿಬೆಟ್, ಮಲೇಷ್ಯಾ, ಶ್ರೀಲಂಕಾ, ಪಾಕಿಸ್ತಾನ, ಅಫ್ಘಾನಿಸ್ತಾನ, ಆಸ್ಟ್ರೀಯಾ, ನೇಪಾಳ, ಬಾಂಗ್ಲಾದೇಶ ಹಾಗೂ ಹಿಮಾಲಯ ಸರೋವರಗಳಿಂದ ಆಗಮಿಸುವ ಬಾನಾಡಿಗಳು, ಈ ಕೆರೆಯಲ್ಲಿ ಐದಾರು ತಿಂಗಳು ನೆಲೆಯೂರಿ ನಂತರ ತಮ್ಮ ತವರಿಗೆ ಮರಳುತ್ತವೆ.
ಅಪರೂಪದ ಪ್ರಾಣಿಯಾದ ನೀರುನಾಯಿಗಳು ಸಹ ಮಾಗಡಿ ಕೆರೆಯಲ್ಲಿವೆ. ಪ್ರಸ್ತುತ ಮಳೆಯ ಕೊರತೆಯಿಂದ ಕೆರೆಯಲ್ಲಿ ನೀರು ಕೊಂಚ ಕಡಿಯಾಗಿದ್ದು, ಕೆರೆಯ ನಡುಗಡ್ಡೆಯಲ್ಲಿ ನೀರುನಾಯಿಗಳು ಕಾಣುತ್ತವೆ. ನೀರಿನಲ್ಲಿ ಕೆಲವೊಮ್ಮೆ ತಲೆಎತ್ತಿ ಅತ್ತಿತ್ತ ನೋಡಿ ಕೂಡಲೇ ಮುಳುಗಿ ಚಲಿಸುತ್ತವೆ. ಇಂತಹ ಅಪರೂಪದ ಪ್ರಾಣಿಗಳು ವಾಸವಾಗಿರುವುದು ಮಾಗಡಿ ಕೆರೆಯ ಮತ್ತೊಂದು ವಿಶೇಷ.
ಜಗತ್ತಿಗೆ ಪರಿಚಯವಾದ ಮಾಗಡಿ ಕೆರೆ:
ಫೆ.2ರಂದು ಪ್ರತಿವರ್ಷ ವಿಶ್ವ ಜೌಗುಪ್ರದೇಶ ದಿನ ಆಚರಿಸಲಾಗುತ್ತದೆ. ಈ ವರ್ಷ ಮಧ್ಯ ಪ್ರದೇಶದ ಸಿರ್ಪೂರ್ ಸರೋವರದ ಪರಿಸರದಲ್ಲಿ ಪ್ರಸ್ತುತ ಕಾರ್ಯಕ್ರಮ ನಡೆಯಿತು. ವಿವಿಧ ದೇಶಗಳಲ್ಲಿ ಜೌಗು ಪ್ರದೇಶದ ಸಂರಕ್ಷಣೆಯಲ್ಲಿ ತೊಡಗಿದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳು, ವಿಜ್ಞಾನಿಗಳು, ಪಕ್ಷಿ ವೀಕ್ಷಕರು, ಸ್ವಯಂ ಸೇವಾ ಸಂಸ್ಥೆಗಳು ಭಾಗವಹಿಸಿದ್ದವು. ಈ ಕಾರ್ಯಕ್ರಮದಲ್ಲಿ ಘೋಷಣೆಯಾದ ಐದು ಪ್ರದೇಶಗಳ ಜೊತೆಯಲ್ಲಿ ಮಾಗಡಿ ಕೆರೆಯ ಮಹತ್ವ ಇಡೀ ಜಗತ್ತಿಗೆ ಗೊತ್ತಾಗಿದೆ ಎಂಬುದು ಪಕ್ಷಿಪ್ರಿಯರ ಹೆಮ್ಮೆಯ ಮಾತುಗಳು.
ಕೆರೆಯನ್ನು ರಾಮ್ಸರ್ ಪಟ್ಟಿಗೆ ಪಟ್ಟಿಗೆ ಸೇರಿಸಿದ್ದು ಹೆಮ್ಮೆಯ ಸಂಗತಿ. ಗ್ರಾಮ ಪಂಚಾಯ್ತಿ ಮೂಲಕ ಸರ್ಕಾರದಿಂದ ಹೆಚ್ಚಿನ ಅನುದಾನ ಪಡೆದು ಕೆರೆಯ ಅಭಿವೃದ್ಧಿಗೆ ಶ್ರಮಿಸಲಾಗುವುದು- ಮೈಲಾರಪ್ಪ ಹಾದಿಮನಿ ಮಾಗಡಿ ಗ್ರಾ.ಪಂ ಅಧ್ಯಕ್ಷ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.