ನರಗುಂದ:‘ನೀರು,ಗಾಳಿ,ಆಹಾರ ಮನುಷ್ಯನಿಗೆ ಬೇಕಾಗಿರುವ ಅಗತ್ಯ ವಸ್ತುಗಳು. ಈ ವಿಷಯಗಳಲ್ಲಿ ರಾಜಕಾರಣ ಸಲ್ಲದು’ ಎಂದು ಮುಂಡರಗಿ ತೋಂಟದಾರ್ಯ ಶಾಖಾ ಮಠದ ನಿಜಗುಣಪ್ರಭು ಸ್ವಾಮೀಜಿ ಹೇಳಿದರು.
ಇಲ್ಲಿನ ಮಹದಾಯಿ ಧರಣಿ ವೇದಿಕೆಯಲ್ಲಿ ರಾಷ್ಟ್ರಪತಿಗೆ ರವಾನಿಸಲು ಸಿದ್ಧಪಡಿಸಲಾದ ದಯಾಮರಣ ಮರಣ ಪತ್ರಕ್ಕೆ ಸಹಿ ಹಾಕಿ ಅವರು ಮಾತನಾಡಿದರು.
‘ಮಹದಾಯಿ ಹೋರಾಟ ಮೂರು ವರ್ಷ ಪೂರೈಸಿದರೂ, ಸರ್ಕಾರ ಇದನ್ನು ಬಹಳ ಲಘುವಾಗಿ ಪರಿಗಣಿಸಿದ್ದರಿಂದ ನೀರಿನ ಸಮಸ್ಯೆ ಬಗೆಹರಿದಿಲ್ಲ. ರೈತರಿಗೆ ಬೆಂಬಲವಾಗಿ ಮಠಾಧೀಶರೂ ದಯಾಮರಣಕ್ಕೆ ಸಿದ್ದರಾಗಿದ್ದೇವೆ. ರಾಷ್ಟ್ರಪತಿ ಇದನ್ನು ಮನಗಂಡು ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೇಕು’ ಎಂದರು.
‘ಮಹದಾಯಿ ಸಮಸ್ಯೆ ಇತ್ಯರ್ಥಕ್ಕೆ ಸಂಸದರ ಪ್ರಾಮಾಣಿಕ ಪ್ರಯತ್ನ ಅಗತ್ಯವಾಗಿದೆ. ಆ ನಿಟ್ಟಿನಲ್ಲಿ ಪ್ರಯತ್ನ ಮಾಡದಿದ್ದರೆ ರಾಜೀನಾಮೆಗೆ ಮುಂದಾಗಬೇಕು. ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದಲೇ ಇದುವರೆಗೆ ಸಮಸ್ಯೆ ಬಗೆಹರಿದಿಲ್ಲ’ ಎಂದರು.
‘ಕುಡಿಯುವ ನೀರಿಗಾಗಿ ನಡೆಯುತ್ತಿರುವ ಈ ಸುದೀರ್ಘ ಹೋರಾಟಕ್ಕೆ, ನೀರು ಮಾರಾಟ ಮಾಡುವ ಕಂಪೆನಿಗಳೂ ಬೆಂಬಲ ಸೂಚಿಸಿ, ರೈತರ ಜತೆಗೆ ಕೈಜೋಡಿಸಬೇಕು’ ಎಂದು ಆಗ್ರಹಿಸಿದರು.
‘ಮಹದಾಯಿ ಹೋರಾಟಕ್ಕೆ ಮಠಾಧೀಶರ ಬೆಂಬಲ ಹಿಂದೆಯೂ ಇತ್ತು. ಈಗ ಅದು ಮತ್ತಷ್ಟು ಹೆಚ್ಚಾಗಿದೆ’ ಎಂದು ರೈತ ಸೇನೆ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಹೇಳಿದರು.
ವೀರಬಸಪ್ಪ ಹೂಗಾರ, ಎಚ್.ಎನ್.ಕೋರಿ, ಎಸ್.ಬಿ.ಜೋಗಣ್ಣವರ, ಈರಣ್ಣ ಗಡಗಿಶೆಟ್ಟರ, ಹನುಮಂತ ಸರನಾಯ್ಕರ, ಪರಶುರಾಮ ಜಂಬಗಿ ಹಾಗೂ ಹೋರಾಟ ಸಮಿತಿ ಸದಸ್ಯರು ಇದ್ದರು.