ನರೇಗಲ್: ಹೋಬಳಿಯ ನಿಡಗುಂದಿ ಗ್ರಾಮದಿಂದ ಗಜೇಂದ್ರಗಡ ಮಾರ್ಗದ ಪಕ್ಕದ ಕಾಲುವೆಗೆ ಗರಸು ಹಾಕಿ ರಸ್ತೆ ನಿರ್ಮಾಣ ಮಾಡಿದ್ದು, ಕೂಡಲೇ ಇದನ್ನು ತೆರವಿಗೆ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಖಾಸಗಿ ಕಂಪನಿಯ ವಾಹನಗಳ ಓಡಾಟಕ್ಕೆ ಇದನ್ನು ನಿರ್ಮಿಸಿದ್ದು, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಗಮನ ಹರಿಸಬೇಕು. ಮಳೆನೀರು ಹರಿದು ಸಮೀಪದ ಹಳ್ಳಕ್ಕೆ ಸೇರುತಿತ್ತು. ಸೇತುವೆ ನಿರ್ಮಿಸದೆ ಅಥವಾ ದೊಡ್ಡದಾದ ಪೈಪುಗಳನ್ನು ಅಳವಡಿಸದೆ ಕೇವಲ ಗರಸು ಹಾಕಿ ರಸ್ತೆ ಮಾಡಿಕೊಂಡಿದ್ದಾರೆ. ಇದರಿಂದ ನೀರು ಹಳ್ಳಕ್ಕೆ ತಲುಪದೆ ಹೊಲದ ಅಲ್ಲಿಯೇ ಸಂಗ್ರಹವಾಗಿದೆ ಮತ್ತು ಹೆಚ್ಚಾದಾಗ ಬೇರೆ ಕಡೆಗೆ ನುಗ್ಗುತ್ತದೆ. ಇಷ್ಟೆಲ್ಲಾ ಸಮಸ್ಯೆ ಇದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಕಂಪನಿಯವರ ವಿರುದ್ದ ಕ್ರಮ ಜರುಗಿಸಬೇಕು ಎಂದು ರೈತರಾದ ಶರಣಪ್ಪ, ಬಸಪ್ಪ ಆಗ್ರಹಿಸಿದ್ದಾರೆ.
ಇದೇ ರೀತಿ ಅನೇಕ ಕಡೆ ತಮ್ಮ ಅಗತ್ಯಕ್ಕೆ ತಕ್ಕಂತೆ ಹೊಲಗಳನ್ನು ಬಳಕೆ ಮಾಡಿಕೊಂಡು ರೈತರಿಗೆ ತೊಂದರೆ ಕೊಡುತ್ತಿದ್ದಾರೆ. ಕೇಳಲು ಹೋದರೆ ಬೇದರಿಕೆ ನೀಡುತ್ತಿದ್ದಾರೆ. ಎಲ್ಲೆಲ್ಲಿ ರೈತರಿಗೆ ಅನ್ಯಾಯವಾಗಿದೆಯೋ ಅಲ್ಲೆಲ್ಲಾ ಪರಿಹಾರ ನೀಡಲು ಕಂಪನಿಯವರು ಮುಂದಾಗಬೇಕು. ಇಲ್ಲವಾದರೆ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಯುವ ಮುಖಂಡ ಸದ್ದಾಂ ನಶೇಖಾನ್ ಎಚ್ಚರಿಕೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.