ನರಗುಂದ: ನರೇಗಾ ಯೋಜನೆಯಡಿ ಗ್ರಾಮ ಪಂಚಾಯ್ತಿ ಮೂಲಕ ಪೌಷ್ಟಿಕಾಂಶ (ನ್ಯೂಟ್ರಿಷಿಯನ್ ಗಾರ್ಡ್ನ್) ತೋಟ ನಿರ್ಮಾಣಕ್ಕೆ ಸರ್ಕಾರ ನೆರವು ನೀಡುತ್ತಿದೆ.
ತಾಲ್ಲೂಕಿನಲ್ಲಿ ಈಗಾಗಲೇ ಇಂಥ ತೋಟಗಳ ನಿರ್ಮಾಣ ಕಾರ್ಯ ಆರಂಭವಾಗಿದ್ದು, ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 100 ಪೌಷ್ಟಿಕಾಂಶ ತೋಟ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಇದರಡಿ ಫಲಾನುಭವಿಗಳ ಆಯ್ಕೆಗೆ ಗ್ರಾಮ ಪಂಚಾಯ್ತಿ ಮುಂದಾಗಿದೆ. ಜತೆಗೆ ಶಾಲಾ ಆವರಣದಲ್ಲಿ ಇದೇ ರೀತಿಯ ತೋಟಗಳನ್ನು ಈಗಾಗಲೇ ನಿರ್ಮಾಣ ಮಾಡುತ್ತಿದೆ.
‘ಅಪೌಷ್ಟಿಕತೆಯಿಂದ ಸಾಕಷ್ಟು ಜನ ಬಳಲುತ್ತಿದಾರೆ. ಆದ್ದರಿಂದ ಪೌಷ್ಟಿಕಾಂಶಯುಕ್ತ ಆಹಾರ ಅಗತ್ಯವಾಗಿದೆ. ಅದನ್ನು ಮನೆಯಲ್ಲಿ ಸಿದ್ಧ ಮಾಡಿಕೊಳ್ಳಲು ಮನೆ ಆವರಣದಲ್ಲಿ ಪೌಷ್ಟಿಕಾಂಶಯುಕ್ತ ಗಿಡಗಳನ್ನು ಬೆಳೆಸಬೇಕಿದೆ. ಇದರಿಂದ ಎಲ್ಲ ಜೀವಸತ್ವಗಳನ್ನು ಸೇವಿಸಿ ಸದೃಢ ಆರೋಗ್ಯ ಹೊಂದಬಹುದು. ಆದ್ದರಿಂದ ಈ ನರೇಗಾ ಯೋಜನೆಯಡಿ ತಾಲ್ಲೂಕಿನಲ್ಲಿ ಕನಿಷ್ಠ 1,300 ತೋಟ ನಿರ್ಮಿಸುವ ಗುರಿ ಇದೆ. ಇದು ಸರಳ ವಿಧಾನವಾಗಿದೆ’ ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ ಕುರ್ತಕೋಟಿ ಹೇಳಿದರು.
15 ರೀತಿ ಸಸ್ಯಗಳು: ತೆಂಗು 2, ಕರಿಬೇವು 3, ನಿಂಬೆ 1, ನುಗ್ಗೆ 1, ಮಾವು 1, ಪಪ್ಪಾಯಿ 2 ಸಸಿಗಳು ಸೇರಿದಂತೆ ಒಟ್ಟು 15 ಸಸಿಗಳನ್ನು ತೋಟಗಾರಿಕೆ ಇಲಾಖೆ ಮೂಲಕ ಪಡೆದುಕೊಂಡು ರೈತರು ಪೌಷ್ಟಿಕಾಂಶ ತೋಟ ನಿರ್ಮಾಣ ಮಾಡಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ಆನಂದ ನರಸಣ್ಣವರ ತಿಳಿಸಿದ್ದಾರೆ.