ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗದಗ ತೋಂಟದಾರ್ಯ ಮಠದ ಜಾತ್ರೆ ಆದರ್ಶ

ಮಣಕವಾಡ ದೇವಮಂದಿರ ಮಹಾಮಠದ ಅಭಿನವ ಮೃತ್ಯುಂಜಯ ಸ್ವಾಮೀಜಿ
Published 27 ಏಪ್ರಿಲ್ 2024, 16:12 IST
Last Updated 27 ಏಪ್ರಿಲ್ 2024, 16:12 IST
ಅಕ್ಷರ ಗಾತ್ರ

ಗದಗ: ‘ಜನರನ್ನು ಆಕರ್ಷಣೆ ಮಾಡುವ ಜಾತ್ರೆಗಳು ನಾಡಿನಲ್ಲಿ ಸಾಕಷ್ಟು ಇರಬಹುದು, ಆದರೆ ಅವೆಲ್ಲಕ್ಕೂ ಭಿನ್ನವಾಗಿ ತೋಂಟದಾರ್ಯ ಮಠದ ಜಾತ್ರೆ ಆದರ್ಶದ ಜಾತ್ರೆಯಾಗಿದೆ’ ಎಂದು ಮಣಕವಾಡ ದೇವಮಂದಿರ ಮಹಾಮಠದ ಅಭಿನವ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಗದಗ ನಗರದ ತೋಂಟದಾರ್ಯ ಮಠದ 2024ನೇ ಸಾಲಿನ ಜಾತ್ರಾ ಮಹೋತ್ಸವದ ಮಂಗಲೋತ್ಸವ ವೇದಿಕೆ ಕಾರ್ಯಕ್ರಮದ ಸಮ್ಮುಖ ವಹಿಸಿ ಮಾತನಾಡಿದರು.

‘12ನೇ ಶತಮಾನದಲ್ಲಿ ಬಸವೇಶ್ವರರು ಕಲ್ಯಾಣದ ಮಂತ್ರಿಯಾಗಿ ಇನ್ನೊಂದು ರಾಜ್ಯವನ್ನು ಕಟ್ಟುವಷ್ಟು ಸಶಕ್ತರಾಗಿದ್ದರು, ಆದರೆ ಅವರು ಭೌತಿಕ ಸಿರಿ-ಸಂಪತ್ತಿನ ರಾಜ್ಯವನ್ನು ಕಟ್ಟದೇ ಜ್ಞಾನದ ರಾಜ್ಯವನ್ನು ನಿರ್ಮಿಸಿದರು. ಬಸವೇಶ್ವರರು ಬರುವ ಪೂರ್ವದಲ್ಲಿ ದುಡಿಯುವ ವರ್ಗಕ್ಕೆ ಹಾಗೂ ಮಹಿಳೆಯರಿಗೆ ಯಾವುದೇ ಸಾಮಾಜಿಕ ಸ್ಥಾನಮಾನ ಇದ್ದಿಲ್ಲ ಎಂಬುದು ಅಚ್ಚರಿಯಾದರೂ ನಿಜ. ಇಂದು ಬಸವತತ್ವವನ್ನು ಬಾಯಲ್ಲಿ ಹೇಳುತ್ತಾ ಅದನ್ನು ಪೂರ್ಣಪ್ರಮಾಣದಲ್ಲಿ ಅಳವಡಿಸಿಕೊಳ್ಳಲು ಹಿಂಜರಿಯುವ ಜನರಿರುವಾಗ ಲಿಂ.ತೋಂಟದ ಸಿದ್ಧಲಿಂಗ ಸ್ವಾಮೀಜಿ ಅಕ್ಷರಶಃ ಬಸವತತ್ವವನ್ನು ಪಾಲಿಸಿದರು’ ಎಂದರು.

ಇಳಕಲ್‌ದ ಗುರುಮಹಾಂತ ಸ್ವಾಮೀಜಿ ಮಾತನಾಡಿ, ‘ಲಿಂ.ಸಿದ್ಧಲಿಂಗ ಶ್ರೀಗಳು ಪೀಠವನ್ನೇರಿದ ನಂತರ ಮಠಕ್ಕೆ ಹಳೆಯ ವೈಭವದ ಜೊತೆಗೆ ರಾಷ್ಟ್ರೀಯ ಮಟ್ಟದ ಖ್ಯಾತಿಯನ್ನು ತಂದುಕೊಟ್ಟರು. ಬಸವತತ್ವಗಳ ನಿಜಾಚರಣೆಗಳನ್ನು ಪಾಲಿಸುತ್ತಿದ್ದ ಲಿಂಗೈಕ್ಯ ಗುರುಗಳು ನಮಗೆಲ್ಲ ಮಾದರಿ’ ಎಂದು ಹೇಳಿದರು.

ಗಡಹಿಂಗ್ಲಜ ಬಿಲ್ವಾಶ್ರಮದ ತಾಯಂದಿರು ಸಂಗೀತ ಕಾರ್ಯಕ್ರಮ ನೀಡಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮಲ್ಲಕಂಬ ಪ್ರದರ್ಶನ ನೀಡಿದರು.

ಗದಗ ತೋಂಟದ ಸಿದ್ಧರಾಮ ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠದ ಅಲ್ಲಮಪ್ರಭು ಸ್ವಾಮೀಜಿ, ಜಡೆಸಿದ್ಧೇಶ್ವರ ಬಿಲ್ವಾಶ್ರಮದ ಮಹಾಂತ ಸಿದ್ಧೇಶ್ವರ ಸ್ವಾಮೀಜಿ, ಹೈದರಾಬಾದ್‌ನ ಶಿವ ಹಂಸಾರೂಢ ಸ್ವಾಮೀಜಿ, ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಕೆ.ಎಚ್.ಬೇಲೂರ, ಉಪಾಧ್ಯಕ್ಷ ಅಮರೇಶ ಚಾಗಿ, ಶ್ರೀದೇವಿ ಶೆಟ್ಟರ, ಶಿವಯ್ಯ ನಾಲತ್ವಾಡಮಠ, ಕಾರ್ಯದರ್ಶಿ ಪ್ರವೀಣ ವಾರಕರ, ಸಹ ಕಾರ್ಯದರ್ಶಿ ಗವಿಸಿದ್ಧಪ್ಪ ಗಾಣಿಗೇರ, ಬರಕತ್ ಅಲಿ ಮುಲ್ಲಾ, ಚಂದ್ರಶೇಖರ ಇಟಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT