ಲಕ್ಷ್ಮೇಶ್ವರ (ಗದಗ ಜಿಲ್ಲೆ): ‘1978ರಲ್ಲಿ ವಿಶ್ವಕರ್ಮ ಸಮಾಜವನ್ನು ಹಿಂದುಳಿದ ಪಟ್ಟಿಗೆ ಸೇರಿಸಲಾಯಿತು. ಈವರೆಗೆ ಸಾಮಾಜಿಕ ನ್ಯಾಯ ಪಡೆದುಕೊಳ್ಳಲು ಆಗುತ್ತಿಲ್ಲ’ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಕೆ.ಪಿ.ನಂಜುಂಡಿ ವಿಷಾದಿಸಿದರು.
‘ವಿಶ್ವಕರ್ಮ ಸಮಾಜಕ್ಕೆ ಎಸ್ಟಿ ಮೀಸಲಾತಿ ನೀಡಬೇಕು’ ಎಂದು ಒತ್ತಾ ಯಿಸಿ ಇಲ್ಲಿ ಹಮ್ಮಿಕೊಂಡಿರುವ ಜಾಗೃತಾ ಸಮಾವೇಶಕ್ಕಾಗಿ ಸೋಮವಾರ ಭೇಟಿ ನೀಡಿದ್ದ ಅವರು ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದರು.
‘ವಿಶ್ವಕರ್ಮ ಸಮಾಜದವರು ಮೂಲತಃ ಗ್ರಾಮೀಣ ಪ್ರದೇಶದಿಂದ ಬಂದವರು. ಶಿಕ್ಷಣದಿಂದ ಸಾಕಷ್ಟು ಹಿಂದುಳಿದಿದ್ದಾರೆ. ಶಿಕ್ಷಣ ಪಡೆದವರಿಗೆ ಉದ್ಯೋಗ ಸಿಗುತ್ತಿಲ್ಲ. ಈ ಸಮಾಜವನ್ನು ಎಸ್ಟಿ ಪಟ್ಟಿಗೆ ಸೇರಿಸಬೇಕು’ ಎಂದು ಆಗ್ರಹಿಸಿದರು.
‘ಸಮಾಜದವರು ರಾಜಕೀಯ ಪ್ರಜ್ಞೆಯಿಂದ ದೂರ ಇದ್ದಾರೆ. ಮೀಸಲಾತಿ ಇಲ್ಲದೇ ಅಧಿಕಾರ ಸಿಗದು. ಅಧಿಕಾರ ಇಲ್ಲದೇ ಸಮಾಜದ ಉದ್ಧಾರವಾಗದು. ಎಸ್ಟಿ ಮೀಸಲಾತಿ ನಮ್ಮ ಹಕ್ಕು, ಈ ಬಗ್ಗೆ ಜಾಗೃತಿ ಮೂಡಿಸಲು ರಾಜ್ಯದ 745 ಹೋಬಳಿಗಳಿಗೆ ಭೇಟಿ ನೀಡಿ ಸಮಾವೇಶ ಮಾಡುತ್ತಿದ್ದೇನೆ’ ಎಂದು ತಿಳಿಸಿದರು.