ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಗಲ್:‌ ನೀರಿಲ್ಲದೇ ಮರುಭೂಮಿಯಂತಾದ ಜಲಮೂಲಗಳು

ಬರಡಾದ ಕೆರೆ–ಕುಂಟೆ: ಬತ್ತಿದ ಕೃಷಿಹೊಂಡ, ಬಾವಿ, ಚೆಕ್‌ ಡ್ಯಾಂಗಳು
ಚಂದ್ರು ಎಂ. ರಾಥೋಡ್‌
Published 8 ಏಪ್ರಿಲ್ 2024, 8:36 IST
Last Updated 8 ಏಪ್ರಿಲ್ 2024, 8:36 IST
ಅಕ್ಷರ ಗಾತ್ರ

ನರೇಗಲ್:‌ ಕಳೆದ ವರ್ಷದ ಮಳೆಯ ಅಭಾವ ಹಾಗೂ ಬರಗಾಲದ ಪರಿಣಾಮದಿಂದ ರೋಣ-ಗಜೇಂದ್ರಗಡ ತಾಲ್ಲೂಕು ಪಂಚಾಯ್ತಿ ವ್ಯಾಪ್ತಿಗೆ ಒಳಪಡುವ ಎಲ್ಲಾ ಹಳ್ಳಿಗಳಲ್ಲಿ ಹಾಗೂ ನರೇಗಲ್‌ ಹೋಬಳಿಯ ಸುತ್ತಮುತ್ತಲಿನ ಎಲ್ಲ ಕೆರೆ, ಬಾವಿ, ಕೃಷಿ ಹೊಂಡ, ಚೆಕ್‌ ಡ್ಯಾಂಗಳಲ್ಲಿ ನೀರು ಬತ್ತಿದೆ. ಅಲ್ಲಿಯ ತಳಭಾಗದ ಮಣ್ಣು ಬಿರುಕು ಬಿಟ್ಟಿದೆ.

ಇತ್ತ ಸಾವಿರ ಅಡಿ ಆಳದಷ್ಟು ಕೊಳವೆಬಾವಿಗಳಲ್ಲಿ ಅಂತರ್ಜಲ ಪಾತಾಳಕ್ಕೆ ಮುಟ್ಟಿದೆ. ಇದರಿಂದಾಗಿ ವನ್ಯಜೀವಿಗಳು ಮತ್ತು ಜನ- ಜಾನುವಾರು ಕುಡಿವ ನೀರಿಗೆ ಪರಿತಪಿಸುವಂತಾಗಿದೆ.

ಏಪ್ರಿಲ್ ಆರಂಭದಲ್ಲೇ ಹಿಂದೆಂದೂ ಕಾಣದಷ್ಟು ಬಿಸಿಲಿನ ತಾಪ ಹೆಚ್ಚುತ್ತಿದೆ. ಜನತೆ ಹಾಗೂ ಪ್ರಾಣಿ ಪಕ್ಷಿಗಳು ಬಿಸಿಲಿನ ಧಗೆ ತಡೆಯಲಾರದೇ ಹೈರಾಣಾಗುತ್ತಿದ್ದಾರೆ. ಹಲವು ಕಡೆಯ ಹಳ್ಳಗಳಲ್ಲಿ, ಕೆರೆ–ಕಟ್ಟೆಗಳು ಹಾಗೂ ಸರುವುಗಳಲ್ಲಿ ನೀರಿಲ್ಲದೇ ಸಂಪೂರ್ಣ ಒಣಗಿ ನಿಂತಿರುವ ದೃಶ್ಯ ಎಲ್ಲೆಡೆ ಕಂಡು ಬರುತ್ತಿದೆ.

ಕೆರೆಗಳಲ್ಲಿ ಅಪಾರ ಪ್ರಮಾಣದ ಮುಳ್ಳಿನ ಕಂಟಿಗಳು, ಆಪು ಬೆಳೆದು ನಿಂತಿದೆ. ಹಳ್ಳ ತನ್ನ ಮೂಲ ಸ್ವರೂಪವನ್ನೇ ಕಳೆದುಕೊಂಡಿದೆ. ಚೆಕ್‌ ಡ್ಯಾಂಗಳಲ್ಲಿ ಹೂಳು ತುಂಬಿದ್ದು ನೀರು ಸಂಗ್ರಹವಾಗದಂತಾಗಿವೆ. ಈ ಭಾಗದಲ್ಲಿ ಯಾವುದೇ ರೀತಿಯ ನದಿ, ಕಾಲುವೆಗಳಂತಹ ನೈಸರ್ಗಿಕ ಆಶ್ರಯಗಳು ಇಲ್ಲದಿರುವ ಕಾರಣದಿಂದಾಗಿ ಬೇಸಿಗೆಯಲ್ಲಿ ಬದುಕಿನ ಜೀವನಾಡಿಯಾಗಿರುವ ಜಲಮೂಲಗಳ ಅಭಿವೃದ್ಧಿಗೆ ಇಲಾಖೆ ಹಾಗೂ ಜನರು ಮೊದಲ ಆದ್ಯತೆ ನೀಡಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

ರೋಣ-ಗಜೇಂದ್ರಗಡ ತಾಲ್ಲೂಕು ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ 35 ಗ್ರಾಮ ಪಂಚಾಯ್ತಿಯ ವಿವಿಧ ಗ್ರಾಮಗಳಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ), ಬಹುಗ್ರಾಮ ನೀರು ಪೂರೈಕೆ ಯೋಜನೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಗ್ರಾಮ ಪಂಚಾಯ್ತಿಗಳಾದ ಇಟಗಿ 3, ಶಾಂತಗೇರಿ 1, ಸವಡಿ 3, ಹಾಲಕೆರೆ 3, ಗೊಗೇರಿ 2, ಮಾಡಲಗೇರಿ 2, ಅಬ್ಬಿಗೇರಿ 4, ಅಸೂಟಿ 4, ಚಿಕ್ಕಮಣ್ಣೂರ 2, ಡ.ಸ.ಹಡಗಲಿ 2, ಜಕ್ಕಲಿ 3, ಕೊತಬಾಳ 6, ಕುರಡಗಿ 11, ಮಲ್ಲಾಪುರ 2, ಮೆಣಸಗಿ 3, ಮುಶಿಗೇರಿ 5, ಸೂಡಿ 3, ಯಾವಗಲ್ಲ 3, ಗುಳಗುಳಿ 5, ಹೊಸಳ್ಳಿ 7, ಮಾರನಬಸರಿ 3, ಹುಲ್ಲೂರ 3, ಕುರಹಟ್ಟಿ 2, ನಿಡಗುಂದಿ 6, ಹೊಳೆಆಲೂರ 1, ಅಮರಗೋಳ 5, ಬೆಳವಣಿಕಿ 1, ಹಿರೇಹಾಳ 2, ಹೊಳೆಮಣ್ಣೂರ 2, ಹುನಗುಂಡಿ 4, ಕೌಜಗೇರಿ 4, ರಾಜೂರ 3, ಲಕ್ಕಲಕಟ್ಟಿ 1 ಮತ್ತು ಕುಂಟೋಜಿ 1 ಕೆರೆ ಸೇರಿದಂತೆ ಹೀಗೆ ಒಟ್ಟು 114 ಕೆರೆಗಳ ಅಭಿವೃದ್ಧಿ ಕಾರ್ಯವಾಗಿದೆ. ಇದರಲ್ಲಿ 76 ಕೆರೆಗಳಲ್ಲಿ ಸ್ವಲ್ಪವೂ ನೀರಿಲ್ಲ. ಸಂಪೂರ್ಣವಾಗಿ ಒಣಗಿದ್ದು ಸುತ್ತಲೂ ಮುಳ್ಳಿನ ಕಂಟಿಗಳು ಆವರಿಸಿವೆ. 38 ಕೆರೆಗಳಲ್ಲಿ ತಗ್ಗು ಹಾಗೂ ಗುಣಿ ಪ್ರದೇಶಗಳಲ್ಲಿ ಮಾತ್ರ ಅಲ್ಪಸ್ವಲ್ಪ ಪ್ರಮಾಣದಲ್ಲಿ ನೀರು ನಿಂತಿದೆ. 17 ಕೆರೆಗಳು ಒತ್ತುವರಿಯಾಗಿವೆ. ಹೀಗಾಗಿ ಜಿಲ್ಲೆಯ ದೊಡ್ಡ ಮಟ್ಟದ ಕೃಷಿಭೂಮಿಯನ್ನು ಹೊಂದಿರುವ ಪ್ರದೇಶದ ಜಲಮೂಲಗಳಲ್ಲಿ ನೀರಿಲ್ಲದೆ ಮರಭೂಮಿಯಂತಾಗಿದೆ.

ಗಜೇಂದ್ರಗಡ ತಾಲ್ಲೂಕು ಪಂಚಾಯ್ತಿ ವತಿಯಿಂದ 2023-24ನೇ ಸಾಲಿನಲ್ಲಿ ಜಲಮೂಲಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಕೆರೆ, ಹಳ್ಳ, ಚೆಕ್‌ ಡ್ಯಾಂ, ನೀರಿನ ತೊಟ್ಟಿಯಂತಹ 52 ಜಲಮೂಲಗಳ ಅಭಿವೃದ್ಧಿಗೆ ಸಂಬಂಧಿಸಿ ₹ 3.29 ಕೋಟಿ  ಮಂಜೂರಾಗಿದೆ. ಅದರಲ್ಲಿ ₹ 1.93 ಕೋಟಿ ಹಣ ಬಿಡುಗಡೆಯಾಗಿದೆ. ಇನ್ನೂ ₹1.35 ಕೋಟಿ ಬಾಕಿ ಉಳಿದಿದೆ. ಈಗಾಗಲೇ 24 ಕಾಮಗಾರಿಗಳು ಪೂರ್ಣಗೊಂಡಿವೆ. 28 ಕಾಮಗಾರಿಗಳು ಸದ್ಯ ನಡೆದಿವೆ. ಇದರಲ್ಲಿ 21 ಕೆರೆಗಳ ಅಭಿವೃದ್ಧಿ– 7 ಕೆರೆಗಳ ಹೂಳು ತೆಗೆಸುವುದು, 11 ಚೆಕ್‌ ಡ್ಯಾಂ ನಿರ್ಮಾಣ ಹಾಗೂ 2 ಹಳ್ಳಗಳ ಕಾರ್ಯ ಸಾಗಿದೆ. ಎರಡೂ ತಾಲ್ಲೂಕು ಪಂಚಾಯ್ತಿ ವ್ಯಾಪ್ತಿಯಲ್ಲಿ 1,545ಕ್ಕೂ ಹೆಚ್ಚು ಕೃಷಿ ಹೊಂಡಗಳಿವೆ. ಆದರೆ, ಎಲ್ಲವೂ ನೀರಿಲ್ಲದೆ ಬಣಗುಡುತ್ತಿವೆ.

ನರೇಗಲ್‌ ಸಮೀಪದ ಮಾರನಬರಿ ಗ್ರಾಮದ ಕೆರೆ ಬತ್ತಿರುವುದು
ನರೇಗಲ್‌ ಸಮೀಪದ ಮಾರನಬರಿ ಗ್ರಾಮದ ಕೆರೆ ಬತ್ತಿರುವುದು
ಸಮುದಾಯದ ಸಹಭಾಗಿತ್ವದಲ್ಲಿ ಜನರೇ ಅಭಿವೃದ್ಧಿಪಡಿಸಿರುವ ನರೇಗಲ್‌ ಪಟ್ಟಣದ ಕೋಡಿಕೊಪ್ಪ ಭಾಗದ ಐತಿಹಾಸಿಕ ಹಿರೇಕೆರೆ ಬರಡಾಗಿರುವುದು
ಸಮುದಾಯದ ಸಹಭಾಗಿತ್ವದಲ್ಲಿ ಜನರೇ ಅಭಿವೃದ್ಧಿಪಡಿಸಿರುವ ನರೇಗಲ್‌ ಪಟ್ಟಣದ ಕೋಡಿಕೊಪ್ಪ ಭಾಗದ ಐತಿಹಾಸಿಕ ಹಿರೇಕೆರೆ ಬರಡಾಗಿರುವುದು
ನರೇಗಲ್‌ ಹಿರೇಕೆರೆ ದಂಡೆಯ ಮೇಲೆ ಬೆಳೆದಿರುವ ಕಂಟಿಗಳು
ನರೇಗಲ್‌ ಹಿರೇಕೆರೆ ದಂಡೆಯ ಮೇಲೆ ಬೆಳೆದಿರುವ ಕಂಟಿಗಳು
ನರೇಗಲ್‌ ಹಿರೇಕೆರೆಯೊಂದರ ತಗ್ಗು ಪ್ರದೇಶದಲ್ಲಿರುವ ನೀರು
ನರೇಗಲ್‌ ಹಿರೇಕೆರೆಯೊಂದರ ತಗ್ಗು ಪ್ರದೇಶದಲ್ಲಿರುವ ನೀರು
ನರೇಗಲ್‌ ಸಮೀಪದ ಮಾರನಬಸರಿ ಗ್ರಾಮದ ಹಳ್ಳದಲ್ಲಿ ತುಂಬಿರುವ ಹೂಳು
ನರೇಗಲ್‌ ಸಮೀಪದ ಮಾರನಬಸರಿ ಗ್ರಾಮದ ಹಳ್ಳದಲ್ಲಿ ತುಂಬಿರುವ ಹೂಳು
ನರೇಗಲ್‌ ಸಮೀಪದ ಹಾಲಕೆರೆ ಗ್ರಾಮದ ಹೊಲವೊಂದರಲ್ಲಿ ಖಾಲಿಯಾಗಿರುವ ಕೃಷಿಹೊಂಡ
ನರೇಗಲ್‌ ಸಮೀಪದ ಹಾಲಕೆರೆ ಗ್ರಾಮದ ಹೊಲವೊಂದರಲ್ಲಿ ಖಾಲಿಯಾಗಿರುವ ಕೃಷಿಹೊಂಡ
ನೈಸರ್ಗಿಕ ಸಂಪನ್ಮೂಲಗಳಾದ ಕೆರೆ ಕೊಳ ಹಾಗೂ ಹೊಂಡಗಳ ಅಭಿವೃದ್ಧಿಗೆ ತಾಲ್ಲೂಕು ಪಂಚಾಯ್ತಿ ವತಿಯಿಂದ ಈ ಹಿಂದಿನಿಂದಲೂ ಪ್ರಥಮ ಆದ್ಯತೆ ನೀಡಲಾಗಿದೆ. ಈಗಲೂ ನರೇಗಾದ ಅಡಿ ಅಭಿವೃದ್ಧಿ ಕಾರ್ಯಗಳು ನಡೆದಿವೆ
ಎಸ್.‌ಕೆ.ಇನಾಮದಾರ್‌ ರೋಣ ಇಒ
ಬಹುತೇಕ ಗ್ರಾ.ಪಂ.ಗಳಲ್ಲಿ ಸ್ಥಳೀಯರಿಂದ ಮಾಹಿತಿ ಪಡೆದು ಕ್ರಿಯಾಯೋಜನೆ ರೂಪಿಸಿ ನರೇಗಾ ಕಾರ್ಮಿಕರಿಂದ ಜಲಮೂಲಗಳ ಅಭಿವೃದ್ಧಿ ನಡೆಸಿದ್ದೇವೆ. ಕೆರೆ ಚೆಕ್‌ ಡ್ಯಾಂ ನೀರಿನ ತೊಟ್ಟಿ ಹಾಗೂ ಹಳ್ಳಗಳ ಅಭಿವೃದ್ಧಿಗೂ ಮುಂದಾಗಿದ್ದೇವೆ ಹಾಗೂ ಜನರಿಗೆ ಅರಿವು ಮೂಡಿಸುತ್ತಿದ್ದೇವೆ
ಡಿ. ಮೋಹನ್‌ ಗಜೇಂದ್ರಗಡ ಇಒ
ಐತಿಹಾಸಿಕ ಹಿರೇಕೆರೆಯಲ್ಲಿ ನೀರಿಲ್ಲ
ನರೇಗಲ್‌ ಪಟ್ಟಣದ ಅಬ್ಬಿಗೇರಿ ಮಾರ್ಗದ ಕಾಲೇಜು ರಸ್ತೆಯ ಎಡಭಾಗದಲ್ಲಿರುವ ಐತಿಹಾಸಿಕ ಹಿರೇಕೆರೆಯನ್ನು ಸ್ಥಳೀಯರು ನೆಲಜಲ ಸಂರಕ್ಷಣಾ ಸಮಿತಿ ರಚನೆ ಮಾಡಿಕೊಂಡು ಸಮುದಾಯದ ಸಹಭಾಗಿತ್ವದಲ್ಲಿ ಉಚಿತವಾಗಿ ಹೂಳೆತ್ತುವ ಕಾರ್ಯ ಮಾಡಿದರು. ದೊಡ್ಡ ಕೆರೆಯನ್ನು 4 ಚಿಕ್ಕ ಕೆರೆಗಳನ್ನಾಗಿ ಅಭಿವೃದ್ಧಿಪಡಿಸಿದರು. ಆದರೆ ಕೆರೆಯಲ್ಲಿ ನೀರಿಲ್ಲದೇ ಬರಡಾಗಿ ಕಾಣುತ್ತಿದೆ. ಒಂದು ಕೆರೆಯ ತಗ್ಗು ಪ್ರದೇಶದಲ್ಲಿ ಅಲ್ಪಪ್ರಮಾಣದ ನೀರಿದೆ. ಅಲ್ಲಿಗೆ ಕೊಕ್ಕರೆ ನವಿಲು ಎಮ್ಮೆ ದನಕರುಗಳು ಬಂದು ನೀರು ಕುಡಿಯುತ್ತವೆ. ಆದರೆ ಕೆರೆಯ ಜಾಗವನ್ನು ಬಯಲು ಬಹಿರ್ದೆಸೆಗೆ ಬಳಕೆ ಮಾಡುತ್ತಿದ್ದಾರೆ ಮತ್ತು ಸಂಜೆಯಾಗುತ್ತಿದ್ದಂತೆ ಕುಡುಕರು ಪುಂಡರು ಅಡ್ಡೆಯನ್ನಾಗಿ ಮಾಡಿಕೊಂಡಿದ್ದಾರೆ. ಸುತ್ತಲೂ ಮುಳ್ಳಿನ ಕಂಟಿಗಳು ಮತ್ತೆ ಬೆಳೆದು ನಿಂತಿವೆ. ಇದರಿಂದ ಸಾರ್ವಜನಿಕರು ಅಭಿವೃದ್ದಿ ಮಾಡಿಕೊಟ್ಟ ಕೆರೆಯನ್ನು ಕಾಪಾಡಿಕೊಂಡು ಹೋಗುವಲ್ಲಿ ಪಟ್ಟಣ ಪಂಚಾಯ್ತಿ ಎಡವಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಸ್ಥಳೀಯರು.
ಕೆರೆಗಳ ಒತ್ತುವರಿ ತೆರವು ಯಾವಾಗ?
ನರೇಗಲ್‌ ಪಟ್ಟಣದ ಐತಿಹಾಸಿಕ ಹಿರೇಕೆರೆ ಮಾಡಲಗೇರಿ ನೈನಾಪುರ ಗ್ರಾಮಗಳ ಊರಮುಂದಿನ ಎರಡು ಕೆರೆ ಅಬ್ಬಿಗೇರಿ ಗ್ರಾಮದ ಕೆಂಪು ಕೆರೆ (ಪ್ರಕರಣ ನ್ಯಾಯಾಲಯದಲ್ಲಿದೆ) ದೇವಿ ಕೆರೆ ಹೊಸಳ್ಳಿಯ ಹೊಸಕೆರೆ ನಿಡಗುಂದಿ ಊರಕೆರೆ ಹಿರೇಹಾಳ ಬಳಗೋಡ ಬೆಳವಣಿಕೆ ಗ್ರಾಮಗಳ ಕುಡಿಯುವ ನೀರಿನ ಕೆರೆ ಕೌಜಗೇರಿ ಕುಡಿಯುವ ನೀರಿನ ಊರಮುಂದಿನ ಕೆರೆ ಮಾಳವಾಡದ ಕುಡಿಯುವ ನೀರಿನ ಕೆರೆ ಹಳಕೆರೆ ಬೈರಾಪುರ ತಾಂಡದ ಕೆರೆ ನಾಗೇಂದ್ರಗಡದ ಸಣ್ಣ ನೀರಾವರಿ ಕೆರೆ ಹಾಗೂ ಬೆಣಚಮಟ್ಟಿ ಗ್ರಾಮದ ಸಣ್ಣ ನೀರಾವರಿ ಕೆರೆಗಳು ಒತ್ತುವರಿಯಾಗಿವೆ. ತಾಲ್ಲೂಕು ಪಂಚಾಯ್ತಿ ವ್ಯಾಪ್ತಿಗೆ ಒಳಪಡುವ ಕೆರೆಗಳ ಒತ್ತುವರಿಯನ್ನು ಹಂತಹಂತವಾಗಿ ತೆರುವುಗೊಳಿಸಲಾಗುತ್ತಿದೆ ಎಂದು ರೋಣ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ತಿಳಿಸಿದರು.
ದಿಕ್ಕಿಲ್ಲದಂತಾಗಿವೆ ಹಳ್ಳಗಳು;
ಯಾವ ಇಲಾಖೆಯೂ ಕಾಳಜಿ ವಹಿಸುತ್ತಿಲ್ಲ ಜಲಮೂಲಗಳಲ್ಲಿ ಮುಖ್ಯವಾಗಿರುವ ಹಳ್ಳಗಳ ರಕ್ಷಣೆಗೆ ಯಾವ ಇಲಾಖೆಯೂ ಮುಂದಾಗುತ್ತಿಲ್ಲ. ಎಲ್ಲೆಡೆ ಹಳ್ಳಗಳ ಒತ್ತುವರಿ ಅಧಿಕವಾಗಿದೆ. ಮರಳು ದಂಧೆಗಾಗಿ ಅದರ ಒಡಲನ್ನು ಅಗೆದು ಮಾರಿಕೊಳ್ಳುತ್ತಿದ್ದಾರೆ. ನರೇಗಲ್‌ ಪಟ್ಟಣದ ಗಡ್ಡಿಹಳ್ಳ ಕಲ್ಲಹಳ್ಳ ಅಬ್ಬಿಗೇರಿ ಹಳ್ಳ ಮಾರನಬಸರಿ ಹಳ್ಳ ಸೇರಿದಂತೆ ಅನೇಕ ಹಳ್ಳಗಳಲ್ಲಿ ಹೂಳು ತುಂಬಿದೆ. ಮುಳ್ಳಿನ ಕಂಟಿಗಳು ಬೆಳೆದು ನಿಂತಿವೆ. ಇದರಿಂದ ತಮ್ಮ ಮೂಲ ಸ್ವರೂಪವನ್ನೇ ಕಳೆದುಕೊಂಡಿವೆ. ಹಳ್ಳಕ್ಕೆ ನೀರು ಹರಿದು ಬರುವ ಮಾರ್ಗಗಳು ಬದಲಾಗಿವೆ. ಇದರಿಂದ ನೀರು ಸಂಗ್ರಹಣೆ ಹಾಗೂ ಅಂತರ್ಜಲಕ್ಕೆ ಪೆಟ್ಟು ಬಿದ್ದಿದೆ. ಯಾವ ಇಲಾಖೆಯು ಹಳ್ಳ ನಮ್ಮ ವ್ಯಾಪ್ತಿಗೆ ಬರುತ್ತದೆ ಎಂದು ರಕ್ಷಣೆಗೆ ಬರುತ್ತಿಲ್ಲ ಎಂಬುದು ಬೇಸರದ ಸಂಗತಿಯಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT